ತಿಲಕರ ಸುತ್ತಮುತ್ತ ಮೆಲ್ಲಮೆಲ್ಲನೆ ಸದಾ ಬೇರೆ ಬೇರೆ ಜನರ ಗುಂಪು ಇರತೊಡಗಿತು. ನಿಜ ಹೇಳಬೇಕೆಂದರೆ ತಿಲಕರು ಕೇವಲ ಐದು ನಿಮಿಷದ ದೂರವಿರುವ ಆಫೀಸಿಗೆ ಹೊರಟರೂ ಸಹ, ಅವರ ಜೊತೆಯಲ್ಲಿ ಕನಿಷ್ಠ ೫೦ ರಿಂದ ೧೦೦ ಜನರ ಗುಂಪು ಇದ್ದೇ ಇರುತ್ತಿತ್ತು. ತಿಲಕರ ಸುತ್ತಮುತ್ತಲಿರುವ ಈ ಮಂದಿ ಅಂದರೆ ಬರಿ ಕುತೂಹಲಕ್ಕೆ ಬಂದವರಲ್ಲ. ಬ್ರಿಟಿಷರ ವಿರುದ್ಧ ಹೋರಾಡಬೇಕು ಎಂದು ಯಾರಿಗೆಲ್ಲ ಅನ್ನಿಸುತ್ತಿತ್ತೋ ಮತ್ತು ಯಾರಿಗೆಲ್ಲ ಭಾರತದ ಸ್ವಾತಂತ್ರ್ಯದ ಕನಸು ಬೀಳುತ್ತಿತ್ತೋ, ಅಂತಹ ಪ್ರತಿಯೊಬ್ಬರೂ ತಿಲಕರನ್ನು ಭೇಟಿಯಾಗಲು ಬರುತ್ತಲೇ ಇದ್ದರು. ಯಾಕೆಂದರೆ ಆ ಕಾಲದಲ್ಲಿ ಇ೦ಡಿಯನ್ ನ್ಯಶ್ನಲ್ ಕಾ೦ಗರೆಸ್ ಲೀಡರ್ (‘Indian National Congress leaders’) ಎಂದು ಹೆಸರು ಮಾಡಿಕೊಂಡಿದ್ದ ನಾಯಕರ ಮೇಲಿನ ವಿಶ್ವಾಸ ಜನರಲ್ಲಿ ಸಾಕಷ್ಟು ಕಡಿಮೆಯಾಗಿತ್ತು.
ಸಂಪೂರ್ಣ ಭಾರತದ ಮೇಲೆ ಪ್ರಭಾವ ಹೊಂದಿದ್ದ ಬಾಲ ಗಂಗಾಧರ ತಿಲಕರು ಮಾತ್ರವೇ ಅಂದಿನ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಬ್ರಿಟಿಷ್ ಸರ್ಕಾರದ ಸಂಪೂರ್ಣ ಗಮನ ಅಂದೇ ಲೋಕಮಾನ್ಯ ತಿಲಕರ ಮೇಲೆಯೇ ನೆಟ್ಟಿತ್ತು.
ತಿಲಕರು ಬಹಿರಂಗವಾಗಿ ಯಾವಾಗಲೂ ‘ಸಶಸ್ತ್ರ ಕ್ರಾಂತಿಯ ಹಾದಿ ಹಿಡಿಯಿರಿ’ ಎಂದು ನೇರವಾಗಿ ಹೇಳುತ್ತಿರಲಿಲ್ಲ. ಯಾಕೆಂದರೆ ೧೮೫೮ರ ನಂತರ ಭಾರತೀಯರ ಮನಸ್ಸಿನಲ್ಲಿ ಬ್ರಿಟಿಷರ ಬಗ್ಗೆ ಕುಳಿತಿದ್ದ ಆ ಭಯವನ್ನು ತಿಲಕರು ಸರಿಯಾಗಿ ಗುರುತಿಸಿದ್ದರು. ಆದ್ದರಿಂದಲೇ ‘ಮೊದಲು ಭಾರತೀಯರ ಮನಸ್ಸಿನಿಂದ ಬ್ರಿಟಿಷರ ಬಗ್ಗೆ ಇರುವ ಭಯವನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುವುದು’ ಎಂಬ ದಾರಿಯನ್ನು ಅವರು ಆರಿಸಿಕೊಂಡರು. ತಿಲಕರ ಎರಡು ಪತ್ರಿಕೆಗಳ ಲೇಖನಗಳು ಬ್ರಿಟಿಷ್ ಸರ್ಕಾರದ ಮೇಲೆ ಅತ್ಯಂತ ಖಾರವಾದ ಮಾತುಗಳಲ್ಲಿ ಟೀಕೆ ಮಾಡುತ್ತಿದ್ದವು ಮತ್ತು ಸಭೆಗಳ ಭಾಷಣಗಳಲ್ಲಿ ತಿಲಕರು, ‘ಬ್ರಿಟಿಷ್ ಸರ್ಕಾರ ಹೇಗೆ ಅನ್ಯಾಯ ಮಾಡುತ್ತಿದೆ’ ಎಂಬ ವಿಷಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಬ್ರಿಟಿಷರನ್ನು ವಿರೋಧಿಸಲು ಜನರಿಗೆ ‘ರಸ್ತೆಗಿಳಿಯುವಂತೆ’ ಸಲಹೆ ನೀಡುತ್ತಿದ್ದರು.
೧೮೯೪ರಲ್ಲಿ ಬಾಲ ಗಂಗಾಧರ ತಿಲಕರು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆರಂಭಿಸಿದರು. ತಮ್ಮದೇ ವಾಡಾದಲ್ಲಿ (ಮನೆಯಲ್ಲಿ) ಅತ್ಯಂತ ದೊಡ್ಡ ಗಣೇಶೋತ್ಸವಕ್ಕೆ ಚಾಲನೆ ಸಿಕ್ಕಿತು. ಇದನ್ನು ನೋಡಿ ಪುಣೆ, ಮುಂಬೈ, ನಾಗ್ಪುರ, ನಾಸಿಕ್, ನಗರ, ಸತಾರಾದಂತಹ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಮತ್ತು ಇಂದಿನ ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ, ಬಂಗಾಳ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿಯೂ ಕೇವಲ ಒಂದು ವರ್ಷದಲ್ಲೇ ಈ ಉತ್ಸವ ಆರಂಭವಾಯಿತು.
ಗಣೇಶೋತ್ಸವ ಆರಂಭಿಸುವ ಹಿಂದೆ ತಿಲಕರಿಗೆ ನಾಲ್ಕು ಪ್ರಮುಖ ಉದ್ದೇಶಗಳಿದ್ದವು.
೧) ಇದು ಧಾರ್ಮಿಕ ವಿಷಯವಾಗಿದ್ದರಿಂದ, ರಾಣಿಯ ಘೋಷಣೆಯ ಪ್ರಕಾರ ಬ್ರಿಟಿಷ್ ಸರ್ಕಾರ ಈ ಉತ್ಸವಗಳನ್ನು ತಡೆಯಲು ಸಾಧ್ಯವಿರಲಿಲ್ಲ. ಜೊತೆಗೆ ‘ಗಣಪತಿ’ ಎನ್ನುವ ದೇವರು ಭಾರತದಾದ್ಯಂತ ಪ್ರತಿಯೊಂದು ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಮೊದಲ ಸ್ಥಾನ ಪಡೆದಿದ್ದನು.
೨) ಉತ್ಸವದ ಹತ್ತು ದಿನಗಳಲ್ಲಿ ಮಧ್ಯಾಹ್ನ ಮತ್ತು ಸಂಜೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಉದಾಹರಣೆಗೆ - ಸಣ್ಣ ಮಕ್ಕಳ ಪೌರಾಣಿಕ ವಿಷಯಗಳ ನಾಟಕಗಳು, ಭಜನಾ ಮಂಡಳಿಗಳಿಂದ ಭಜನೆ, ಖೋ-ಖೋ, ಹುತೂತೂ (ಕಬಡ್ಡಿ), ಲಗೋರಿಯಂತಹ ಆಟಗಳು, ಓಟದ ಮತ್ತು ಉದ್ದ ಜಿಗಿತದ ಸ್ಪರ್ಧೆಗಳು, ನಕಲು ಮತ್ತು ಮ್ಯಾಜಿಕ್ ಪ್ರದರ್ಶನಗಳು.
ಈ ಕಾರ್ಯಕ್ರಮಗಳನ್ನು ನೋಡಲು ಮತ್ತು ಗಣಪತಿಯ ದರ್ಶನಕ್ಕಾಗಿ ಅಕ್ಷರಶಃ ಜನಸಾಗರವೇ ಸೇರುತ್ತಿತ್ತು. ಈ ಕಾರ್ಯಕ್ರಮಗಳಿಗೆ ಬಂದ ಜನರು ತಮ್ಮತಮ್ಮೊಳಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಹರಟೆ ಹೊಡೆಯುತ್ತಿದ್ದರು. ತಿಲಕರು ತಯಾರಿಸಿದ ಉತ್ಸಾಹಿ ಯುವ ಕಾರ್ಯಕರ್ತರು ಇಂತಹ ಜನರ ನಡುವೆ ಓಡಾಡುತ್ತಾ ‘ಬ್ರಿಟಿಷರು ಎಷ್ಟು ಕೆಟ್ಟವರು ಮತ್ತು ಭಾರತೀಯ ಸಂಸ್ಕೃತಿ ಎಷ್ಟು ಶ್ರೇಷ್ಠ’ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಪ್ರೇರೇಪಿಸುತ್ತಿದ್ದರು.
ಸುಮಾರು ೩೦-೩೫ ವರ್ಷಗಳ ನಂತರ ಭಾರತೀಯರು ಈ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಶುರು ಮಾಡಿದರು ಮತ್ತು ಅನೇಕರು ತಮ್ಮ ಮನಸ್ಸಿನಲ್ಲಿದ್ದ ಹೆದರಿಕೆಯನ್ನು ಬಿಟ್ಟು ತಿಲಕರ ಕಾರ್ಯದಲ್ಲಿ ಭಾಗಿಯಾಗಲು ಸಿದ್ಧರಾದರು.
೩) ಈ ಉತ್ಸವದ ನೆಪದಲ್ಲಿ ಲೋಕಮಾನ್ಯ ತಿಲಕರು ತಮ್ಮ ಸಹೋದ್ಯೋಗಿಗಳ ಮೂಲಕ ಉತ್ಸವ ನಿಧಿಯನ್ನು ಸಂಗ್ರಹಿಸಲು ಶುರು ಮಾಡಿದರು. ಈ ಹಣವನ್ನು ಅಲ್ಲಲ್ಲಿ ಗರಡಿ ಮನೆ ಮತ್ತು ವ್ಯಾಯಾಮ ಶಾಲೆಗಳನ್ನು ತೆರೆಯಲು, ಮೈದಾನದ ಕ್ರೀಡೆಗಳ ಸ್ಪರ್ಧೆಗಳನ್ನು ನಡೆಸಲು ಮತ್ತು ಮುಖ್ಯವಾಗಿ ಕ್ರಾಂತಿಕಾರಿಗಳಿಗೆ ಸಹಾಯ ಮಾಡಲು ಬಳಸಲಾಗುತ್ತಿತ್ತು. ಇದರಿಂದಾಗಿ ಮಹಾರಾಷ್ಟ್ರ, ಬಂಗಾಳ ಮತ್ತು ಪಂಜಾಬ್ಗಳಲ್ಲಿ ಕ್ರಾಂತಿಕಾರಿಗಳ ಹೊಸ ಹೊಸ ತಂಡಗಳು ಹುಟ್ಟಿಕೊಂಡವು.
ಪಂಜಾಬ್ನಿಂದ ಲಾಲಾ ಲಜಪತ್ ರಾಯ್ ಮತ್ತು ಬಂಗಾಳದಿಂದ ಬಿಪಿನ್ ಚಂದ್ರ ಪಾಲ್ ಎಂಬ ಇಬ್ಬರು ಸಿಂಹಗಳು ತಿಲಕರ ಜೊತೆಗಾರರಾದರು ಮತ್ತು ಇಡೀ ಭಾರತದಲ್ಲಿ ‘ಭಾರತ-ತ್ರಿಮೂರ್ತಿ’ ಅಂದರೆ ‘ಲಾಲ್-ಬಾಲ್-ಪಾಲ್’ ಎಂಬ ಹೆಸರಿನಿಂದ ಪ್ರಸಿದ್ಧರಾದರು.
೪) ಈ ಗಣೇಶೋತ್ಸವದ ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ಉಪನ್ಯಾಸ ಮಾಲೆಗಳನ್ನು ಆರಂಭಿಸಲಾಯಿತು. ಇದರಿಂದಾಗಿ ಅನೇಕ ಜನರಿಗೆ ಮೈದಾನಕ್ಕೆ ಬಂದು ಭಾಷಣ ಕೇಳುವ ಅಭ್ಯಾಸ ಬೆಳೆಯಿತು. ಸಾಮಾನ್ಯ ಜನರಿಗೆ ಭಯವಾಗಬಾರದು ಎಂದು ಮೊದಲ ವರ್ಷದ ಉಪನ್ಯಾಸಗಳನ್ನು ತೀರಾ ಸಾಮಾನ್ಯ ವಿಷಯಗಳ ಮೇಲೆ ಇರಿಸಲಾಗಿತ್ತು. ಉದಾಹರಣೆಗೆ - ಶಿವಾಜಿ ಮಹಾರಾಜರು ಮತ್ತು ಅವರ ಪರಾಕ್ರಮ, ಮಹಾಭಾರತದ ಯುದ್ಧ ಮತ್ತು ಗೀತೆ, ಆದಿಶಂಕರಾಚಾರ್ಯರು ಮತ್ತು ಅವರ ಕಾರ್ಯ, ವಿವಿಧ ವ್ರತಗಳು ಮತ್ತು ಅವುಗಳ ಮಹತ್ವ ಹಾಗೂ ರಾಮಾಯಣದ ಕಥೆಗಳು. ಈ ರಾಮಾಯಣದ ಕಥೆಗಳ ಮೂಲಕ, ತಿಲಕರು ವಿಶೇಷವಾಗಿ ಆರಿಸಿದ ಕಥೆಗಾರರು ರಾವಣನನ್ನು ಬ್ರಿಟಿಷರ ಮೂಲ ರೂಪ ಎಂದು ಬಹಿರಂಗವಾಗಿ ತೋರಿಸುತ್ತಿದ್ದರು. ಆದರೆ ಅವರು ‘ಬ್ರಿಟಿಷ್’ ಎಂಬ ಹೆಸರನ್ನು ಮಾತ್ರ ಬಳಸುತ್ತಿರಲಿಲ್ಲ.
ಒಂದೇ ವರ್ಷದಲ್ಲಿ ಜನರ ಸಾರ್ವಜನಿಕ ಸಭೆಗಳಿಗೆ ಹಾಜರಾಗುವ ಭಯ ಸಂಪೂರ್ಣವಾಗಿ ಮಾಯವಾಯಿತು. ಇದರಿಂದ ಪ್ರೇರಿತರಾಗಿ ತಿಲಕರು ೧೮೯೫ರಲ್ಲಿ ಶ್ರಿ ಶಿವಾಜಿ ಮಹಾರಾಜ ಫ೦ಡ ಕಮಿಟಿ (‘Shri Shivaji Maharaj Fund Committee’) ಎಂಬ ಹೆಸರಿನ ಸಮಿತಿಯನ್ನು ಸ್ಥಾಪಿಸಿದರು. ಅದರ ಪ್ರಮುಖ ಉದ್ದೇಶಗಳು ಹೀಗಿದ್ದವು ೧) ಶಿವಾಜಿ ಮಹಾರಾಜರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವುದು ಮತ್ತು ‘ಛತ್ರಪತಿ ಶಿವಾಜಿ ಮಹಾರಾಜ’ ಎಂಬ ಹೆಸರಿನ ಧ್ವಜವನ್ನು ಎತ್ತರಕ್ಕೆ ಹಾರಿಸುವುದು. ೨) ಎರಡನೆಯ ಉದ್ದೇಶ, ಛತ್ರಪತಿ ಶಿವಾಜಿ ಮಹಾರಾಜರ ರಾಯಗಡದ ಮೇಲಿರುವ ಸಮಾಧಿಯ ಉತ್ತಮ ನಿರ್ವಹಣೆ ಮಾಡುವುದು ಮತ್ತು ರಾಯಗಡ ಹಾಗೂ ರಾಜಗಡಕ್ಕೆ ಯುವಕ-ಯುವತಿಯರ ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸುವುದು.
ಇಂತಹ ಪ್ರತಿಯೊಂದು ಪ್ರವಾಸದ ಸಮಯದಲ್ಲಿ ತಿಲಕರ ಒಬ್ಬೊಬ್ಬ ನಂಬಿಕಸ್ತ ಮತ್ತು ಅನುಭವಿ ಕಾರ್ಯಕರ್ತರು ಅಲ್ಲಿ ಉಪಸ್ಥಿತರಿರುತ್ತಿದ್ದರು ಮತ್ತು ಜನರಿಗೆ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ ಪ್ರಚಂಡ ಹೋರಾಟದ ಬಗ್ಗೆ ವಿವರವಾಗಿ ತಿಳಿಸುತ್ತಿದ್ದರು.
ಅದರಲ್ಲೂ ಮುಖ್ಯವಾಗಿ, ಬೃಹತ್ ಆಗಿ ಹರಡಿದ್ದ ಮತ್ತು ಐದು ಲಕ್ಷಕ್ಕೂ ಹೆಚ್ಚು ಸೈನ್ಯ ಹೊಂದಿದ್ದ ಮೊಘಲ್ ಬಾದಶಾಹ ಮತ್ತು ಬಿಜಾಪುರದ ಆದಿಲ್ಶಾಹ ಜೊತೆ ಛತ್ರಪತಿ ಮತ್ತು ಅವರ ಮಾವಳರು ಹೇಗೆ ಹೋರಾಡಿದರು ಮತ್ತು ಗೆದ್ದರು ಎಂಬುದರ ಮೇಲೆಯೇ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು.
ಈ ಪ್ರವಾಸಗಳಿಂದ ಮತ್ತು ಇಂತಹ ಕಾರ್ಯಕ್ರಮಗಳಿಂದ ಸಾಮಾನ್ಯ ಭಾರತೀಯರ ಮನಸ್ಸಿನಲ್ಲಿದ್ದ ಬ್ರಿಟಿಷರ ಆತಂಕ ಕಡಿಮೆಯಾಗತೊಡಗಿತು ಮತ್ತು ತಿಲಕರ ವಿವಿಧ ಕಾರ್ಯಕ್ರಮಗಳಲ್ಲಿ ಭಾರತೀಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲು ಶುರು ಮಾಡಿದರು.
ಮತ್ತು ಆ ೨೨ ಜೂನ್ ೧೮೯೭ರ ದಿನ ಉದಯಿಸಿತು. ಯುಗಾದಿ ಹಬ್ಬದಂದೇ ತಮ್ಮ ಕೆಲಸಕ್ಕೆ ಚಾಲನೆ ನೀಡಿದ್ದ ಚಾಫೇಕರ್ ಸಹೋದರರು, ಪ್ಲೇಗ್ ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಭೀಕರ ಅತ್ಯಾಚಾರ ಮಾಡುತ್ತಿದ್ದ ಕಮಿಶ್ನರ್ ರ್ಯಾ೦ಡ್ (‘Commissioner Rand’) ಮತ್ತು ಲೆಫ಼್ತನೆ೦ಟ್ ಅರೆಸ್ಟ್ (Lieutenant Ayerst) ಅವರಿಗೆ ಗುಂಡಿಕ್ಕಿ ಕೊಂದರು. ಅವರ ಶವಗಳು ರಸ್ತೆಯಲ್ಲಿ ಬಿದ್ದಿರುವುದನ್ನು ಇಡೀ ಜನತೆ ಕಂಡಿತು.
ಈ ಪ್ರಸಂಗದ ಫೋಟೋಗಳು ಮತ್ತು ಸುದ್ದಿಗಳು ಭಾರತದ ಪ್ರತಿಯೊಂದು ಭಾಷೆಯ ದಿನಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ತಕ್ಷಣವೇ ಪ್ರಕಟವಾದವು.
ಈ ಘಟನೆಯಿಂದ ಭಾರತದ ಪ್ರತಿಯೊಬ್ಬ ಬ್ರಿಟಿಷ್ ಆಫೀಸರ್, ಇಲ್ಲಿಯವರೆಗೆ ವೈಸ್ರಾಯ್ ಕೂಡ ಬೆಚ್ಚಿಬಿದ್ದಿದ್ದರು ಮತ್ತು ಬ್ರಿಟನ್ನಲ್ಲಿ ಕುಳಿತಿದ್ದ ಬ್ರಿಟಿಷ್ ಗವರ್ನಮೆಂಟ್ಗೆ ದೊಡ್ಡ ಆಘಾತವಾಯಿತು.
ಈ ಹತ್ಯೆಗಳ ಹಿಂದೆ ಲೋಕಮಾನ್ಯ ತಿಲಕರ ಕೈವಾಡವಿದೆ ಎಂಬ ಬಗ್ಗೆ ಬ್ರಿಟಿಷ್ ಸರ್ಕಾರಕ್ಕೆ ಖಾತ್ರಿಯಾಗಿತ್ತು, ಆದರೆ ಅವರಿಗೆ ಒಂದೂ ಪುರಾವೆ ಸಿಗಲಿಲ್ಲ. ಯಾಕೆಂದರೆ ಚಾಫೇಕರ್ ಸಹೋದರರು ತಿಲಕರನ್ನು ಭೇಟಿಯಾಗುವಾಗ ಯಾವಾಗಲೂ ಹಳ್ಳಿಯ, ಅನಕ್ಷರಸ್ಥ ರೈತರ ವೇಷದಲ್ಲಿಯೇ ಬರುತ್ತಿದ್ದರು. ಚಾಫೇಕರ್ ಸಹೋದರರ ಇತರ ಸಹಚರರು ತಿಲಕರನ್ನು ತೇಲಿ, ತಂಬೂಲಿ, ಬಡಗಿ, ಕುರುಬ, ಕುಂಬಾರ, ಕಮ್ಮಾರ, ಮಾಲಿ ಹಾಗೂ ಹೂವಿನ ಅಲಂಕಾರ ಮಾಡುವವರ ವೇಷದಲ್ಲಿ ಭೇಟಿಯಾಗುತ್ತಿದ್ದರು.
ತಿಲಕರ ಬಳಿ ಇಂತಹ ಹದಿನೆಂಟು ಜಾತಿಯ ಸಾಮಾನ್ಯ ಜನರ ಓಡಾಟ ಯಾವಾಗಲೂ ಇರುತ್ತಿತ್ತು. ಈ ಕಾರಣಕ್ಕಾಗಿಯೇ ತಿಲಕರನ್ನು ಬ್ರಿಟಿಷ್ ಆಫೀಸರ್ಗಳು ಮತ್ತು ಕಾಂಗ್ರೆಸ್ನ ಮಂದಗಾಮಿಗಳು, ‘ತೇಲಿ-ತಂಬೂಲಿಗಳ ನಾಯಕ’ ಅಂದರೆ ‘ಬಡ ಕೆಲಸಗಾರರ ನಾಯಕ’ ಎಂದು ಅಪಹಾಸ್ಯ ಮಾಡುತ್ತಿದ್ದರು. ಆದರೆ ತಿಲಕರು ಇದನ್ನು ಅವಮಾನ ಎಂದು ಭಾವಿಸದೆ, ತಮ್ಮ ಪಾಲಿನ ಗೌರವ ಎಂದೇ ಭಾವಿಸಿದರು.
ಇದೇ ಜನಸ್ತೋಮದ ಮೂಲಕ ತಿಲಕರ ಕಾರ್ಯಕ್ಕೆ ಭರ್ಜರಿ ವೇಗ ಸಿಕ್ಕಿತು. ಚಾಫೇಕರ್ ಸಹೋದರರ ಒಂದು ಗುಪ್ತ ಅಡಗುತಾಣದಲ್ಲಿ ಬ್ರಿಟಿಷರಿಗೆ ತಿಲಕರು ಭಗವದ್ಗೀತೆಯ ಮೇಲೆ ಬರೆದ ಲೇಖನ ಸಿಕ್ಕಿತು. ಅದರಲ್ಲಿ ‘ದೌರ್ಜನ್ಯ ಮತ್ತು ಅನ್ಯಾಯ ಮಾಡುವವರನ್ನು ಕೊಲ್ಲುವುದು ಪಾಪವಲ್ಲ’ ಎಂದು ಲೋಕಮಾನ್ಯರು ತಮ್ಮದೇ ಶಬ್ದಗಳಲ್ಲಿ ಬರೆದಿದ್ದರು.
ಎಲ್ಲಾ ಕೊಂಡಿಗಳು ಸರಿಯಾಗಿ ಸೇರುತ್ತಿದ್ದವು. ಆದರೆ ಕ್ರಾಂತಿಕಾರಿಗಳು ಕೂಡ ಗಟ್ಟಿಯಾಗಿ ಮೌನವಾಗಿಯೇ ಉಳಿದರು ಮತ್ತು ಚಾಫೇಕರ್ ಅವರ ಇತರ ಸಹಚರರು ಎಲ್ಲಾ ಪುರಾವೆಗಳನ್ನು ನಾಶಪಡಿಸಿದ್ದರಿಂದ, ಬ್ರಿಟಿಷ್ ಸರ್ಕಾರಕ್ಕೆ ತಿಲಕರನ್ನು ಗಲ್ಲಿಗೇರಿಸಲು ಸಾಧ್ಯವಾಗಲಿಲ್ಲ.
(ಕಥೆ ಮುಂದುವರಿಯುವುದು)


