ಮೋತಿಬಾಯಿ ಮತ್ತು ಸರ್ದಾರ್ ಮಂಜುನಾಥ ಪಹಾಡಿ ಅವರ ನೇತೃತ್ವದಲ್ಲಿ ಈ ತಂಡವು ಲಮಾಣ ಆದಿವಾಸಿಗಳ ವೇಷದಲ್ಲಿ ಕಾಡಿನಿಂದ ಇನ್ನೊಂದು ದಿಕ್ಕಿನತ್ತ ಹೊರಬರತೊಡಗಿದರು. ಮೋತಿಬಾಯಿ ಆ ‘ಖೂನ್ ಕಿ ಘಾಟಿ’ಯಲ್ಲಿದ್ದ ಒಂದು ಲಮಾಣ ತಂಡದಿಂದ ಈ ವಸ್ತ್ರಗಳನ್ನು ಸಮಯಪ್ರಜ್ಞೆಯಿಂದ ಪಡೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಅವರಿಗೆ ಸಾಕಷ್ಟು ಹಣವನ್ನೂ ಕೊಟ್ಟಿದ್ದರು. ಆ ಲಮಾಣಗಳು ಕೂಡ ಬ್ರಿಟಿಷರ ಶಿಭಿರದ ವಿರುದ್ಧ ದಿಕ್ಕಿನಲ್ಲೇ ಹೋಗುತ್ತಿದ್ದ ಕಾರಣ, ಯಾರಿಗೂ ಅದರ ಚಿಂತೆ ಇರಲಿಲ್ಲ.
ಆದರೆ ಮೋತಿಬಾಯಿಗೆ ಇನ್ನು ಮನಶ್ಶಾಂತಿ ಇರಲಿಲ್ಲ. ಏಕೆಂದರೆ ಲಮಾಣಗಳ ವಸ್ತ್ರ ಮತ್ತು ದಪ್ಪ ಮಣಿಗಳ ಆಭರಣಗಳು ಅವರ ಬಳಿ ಇದ್ದರೂ, ಲಮಾಣಿಗಳ ಜೊತೆ ಯಾವಾಗಲೂ ಇರುವ ದನಕರುಗಳು ಇವರ ಬಳಿ ಇರಲಿಲ್ಲ. ಆ ಲಮಾಣಿ ತಂಡವು ತಮ್ಮ ಪ್ರಾಣಿಗಳನ್ನು ಕೊಡಲು ಒಪ್ಪಿರಲಿಲ್ಲ. ಮೋತಿಬಾಯಿ ಮತ್ತು ಮುಂದರಬಾಯಿ ಸೇರಿ ಈ ಇಪ್ಪತ್ತು ಮಂದಿ ಲಮಾಣಿ ಸ್ತ್ರೀ-ಪುರುಷರ ವೇಷದಲ್ಲಿ ‘ಪಲಧಾಡಿ’ ಎಂಬ ಹಳ್ಳಿಯ ಕಡೆಗೆ ಹೊರಟರು. ಆ ಊರಿಗೇ ಹೋಗಬೇಕೆಂದು ಅವರು ಯಾಕೆ ನಿರ್ಧರಿಸಿದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಯಾರೂ ಏನನ್ನೂ ಕೇಳಲಿಲ್ಲ.
ಬೆಳಗಿನ ಜಾವವಾಗುತ್ತಿದ್ದಂತೆಯೇ ಆ ಇಪ್ಪತ್ತು ಮಂದಿ ಪಲಧಾಡಿ ಹಳ್ಳಿಯ ಗಡಿಯ ಹತ್ತಿರ ಬಂದು ತಲುಪಿದರು. ಆ ಊರಿನ ಗಡಿಯ ಹೊರಭಾಗದಲ್ಲೇ ದುರ್ಗಾದೇವಿಯ ಒಂದು ಪುಟ್ಟ ದೇವಸ್ಥಾನವಿತ್ತು, ಅದು ಎಲ್ಲರಿಗೂ ಪರಿಚಿತವಾಗಿತ್ತು.
ಮೋತಿಬಾಯಿ ಈ ಲಮಾಣಿಗಳಿಂದ ಸಿಕ್ಕ ಸವಲತ್ತುಗಳ ಸಹಾಯದಿಂದ ದೇವಸ್ಥಾನದ ಪಕ್ಕದಲ್ಲೇ ಐದು ಡೇರೆಗಳನ್ನು ಹಾಕಲು ತಿಳಿಸಿದರು - ಅಚ್ಚ ಅಸಲಿ ಲಮಾಣಿಗಳ ಡೇರೆಗಳಂತೆಯೇ; ಮತ್ತು ತಾನು ಮಾತ್ರ ಯಾರಿಗೋ ಕಾಯುತ್ತಿರುವಂತೆ ಅಥವಾ ಯಾರನ್ನೋ ಹುಡುಕುತ್ತಿರುವಂತೆ ದೇವಸ್ಥಾನದ ಹಿಂದಿರುವ ಒಂದು ಎತ್ತರದ ಬಂಡೆಯ ಮೇಲೆ ಹೋಗಿ ಕುಳಿತರು.
ಬೆಳಗಿನ ಜಾವ ಮುಗಿದು ಬೆಳಕಾಗುವ ಸಮಯ ಹತ್ತಿರವಾಗುತ್ತಿತ್ತು. ಪೂರ್ತಿ ಬೆಳಕಾಗುವ ಮೊದಲು ಕುದುರೆಗಳ ವ್ಯವಸ್ಥೆ ಮಾಡುವುದು ಅಗತ್ಯವೆಂದು ಎಲ್ಲರಿಗೂ ಅನ್ನಿಸುತ್ತಿತ್ತು. ಆದರೆ ಯಾರ ಬಳಿಯೂ ಯಾವುದೇ ದಾರಿ ಇರಲಿಲ್ಲ. ಇನ್ನುಳಿದ ೧೯ ಮಂದಿ ಲಮಾಣಿ ಡೇರೆಗಳನ್ನು ಕಟ್ಟಿ, ಲಮಾಣಿಗಳಿಂದಲೇ ಪಡೆದ ಮಡಕೆ-ಕುಡಿಕೆ ಹಾಗೂ ಬುಟ್ಟಿಗಳನ್ನು ಇಟ್ಟು, ಲಮಾಣಿಗಳಂತೆಯೇ ಬೆಳಗ್ಗೆ ಕಟ್ಟಿಗೆಯನ್ನು ಆರಿಸಲು ತೊಡಗಿದರು. ಅದೃಷ್ಟವಶಾತ್ ಇನ್ನೂ ಯಾವ ಹಳ್ಳಿಗರೂ ದೇವಸ್ಥಾನದ ಕಡೆಗೆ ಬಂದಿರಲಿಲ್ಲ.
ಮೋತಿಬಾಯಿ ಆ ಎತ್ತರದ ಬಂಡೆಯ ಮೇಲಿಂದ ಇವರಿಗೆಲ್ಲ ಸನ್ನೆ ಮಾಡಿ ಕೆಳಗಿಳಿಯುತ್ತಿದ್ದರು, ಅಷ್ಟರಲ್ಲಿ ದೇವಸ್ಥಾನದ ಬಲ ಭಾಗದ ದಟ್ಟ ಪೊದೆಗಳಿಂದ ಒಬ್ಬ ಹುಚ್ಚಿಯಂತೆ ಕಾಣುವ ಮತ್ತು ವಿಚಿತ್ರ ಚೇಷ್ಟೆಗಳನ್ನು ಮಾಡುತ್ತಿದ್ದ ಹೆಂಗಸು ಓಡುತ್ತಾ ಬಂದಳು. ಮುಂದರಬೇಗಂ ಮತ್ತು ಇತರ ಇಬ್ಬರು ಸಹಚರರಿಗೆ ಅನುಮಾನ ಬಂದು ಅವಳನ್ನು ಹಿಡಿಯಲು ಹತ್ತಿರ ಹೋದರು.
ಆದರೆ ಬಂಡೆಯಿಂದ ಅವಸರದಿಂದ ಕೆಳಗಿಳಿಯುತ್ತಿದ್ದ ಮೋತಿಬಾಯಿ ಅವರನ್ನು ಕೈ ಸನ್ನೆ ಮಾಡಿ ತಡೆದರು. ಅದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದವರ ನಡುವಿನಿಂದ ರಾಜಕುಂವರ ಯಾದವ್ ವೇಗವಾಗಿ ಮುಂದೆ ಬಂದಳು.
ರಾಜಕುಂವರ ಮೆಲು ದನಿಯಲ್ಲಿ ಎಲ್ಲರಿಗೂ ಹೇಳಿದಳು, “ಇವಳು ‘ಕಾಶೀಬಾಯಿ ಕುಂಬಿನ್.’ (ಕೆಲವೆಡೆ ‘ಕಾಶೀಬಾಯಿ ಕುಣಬಿಣ್’ ಎಂದೂ ಉಲ್ಲೇಖವಿದೆ.) ಇವಳ ಬಳಿಯೇ ದಾಮೋದರರಾವ್ನನ್ನು (ರಾಣಿ ಲಕ್ಷ್ಮೀಬಾಯಿಯ ದತ್ತು ಪುತ್ರ) ಒಪ್ಪಿಸಲಾಗಿದೆ. ಇವಳು ಪಲಧಾಡಿ ಹಳ್ಳಿಯ ಒಂದು ಗುಡಿಸಲಿನಲ್ಲಿ ‘ಒಬ್ಬ ಹುಚ್ಚಿ ಹೆಂಗಸು’ ಎಂದು ತನ್ನ ಪುಟ್ಟ ಮಗನೊಂದಿಗೆ ವಾಸವಾಗಿದ್ದಾಳೆ. ನಾನು ಕೂಡ ಇವಳನ್ನು ಮೊದಲಿಗೆ ಗುರುತಿಸಲು ಸಾಧ್ಯವಾಗಲಿಲ್ಲ, ಅಷ್ಟು ಚನ್ನಾಗಿ ಇವಳು ವೇಷ ಮರೆಸಿಕೊಂಡಿದ್ದಾಳೆ.”
ಮೋತಿಬಾಯಿ ಹತ್ತಿರ ಬಂದ ಕೂಡಲೇ ಕಾಶೀಬಾಯಿಯನ್ನು ಅತ್ಯಂತ ಆವೇಶದಿಂದ ಗಟ್ಟಿಯಾಗಿ ಅಪ್ಪಿಕೊಂಡರು. ಅವರಿಬ್ಬರೂ ಬಾಲ್ಯದ ಆಪ್ತ ಗೆಳತಿಯರಾಗಿದ್ದರು. ಮೋತಿಬಾಯಿ ಅಪ್ಪಿಕೊಂಡ ರೀತಿಗೆ ಕಾಶೀಬಾಯಿಗೆ ಅರ್ಥವಾಯಿತು - ‘ರಾಣಿ ಲಕ್ಷ್ಮೀಬಾಯಿ ಈ ಜಗತ್ತಿನಲ್ಲಿ ಇಲ್ಲ’ ಎಂದು. ಅವಳಿಗೆ ಕಣ್ಣೀರು ತಡೆಯಲು ಸಾಧ್ಯವಾಗಲೇ ಇಲ್ಲ. ಅವಳನ್ನು ಸಾಂವನ ಮಾಡುವುದು ಮೋತಿಬಾಯಿ ಮತ್ತು ರಾಜಕುಂವರಳಿಗೂ ಕಷ್ಟವಾಗುತ್ತಿತ್ತು. ಕಾಶೀಬಾಯಿ ಮತ್ತು ಮೋತಿಬಾಯಿ ಇಬ್ಬರೂ ರಾಣಿ ಲಕ್ಷ್ಮೀಬಾಯಿಯ ಅತ್ಯಂತ ಆಪ್ತ ಗೆಳತಿಯರಾಗಿದ್ದರು ಮತ್ತು ಮುಖ್ಯವಾಗಿ ಕಾಶೀಬಾಯಿಯು ಮೊರೋಪಂತರ ಪ್ರಮುಖ ಸಹಾಯಕಿಯಾಗಿದ್ದಳು ಎಂಬುದು ಕೇವಲ ಮೋತಿಬಾಯಿಗೆ ಮಾತ್ರ ತಿಳಿದಿತ್ತು.
ಕೊನೆಗೆ ಸರ್ದಾರ್ ಮಂಜುನಾಥ ಪಹಾಡಿ ಅವರು ಸಮಯ ಪ್ರಜ್ಞೆಯಿಂದ ಮುಂದೆ ಬಂದು, ಹಿರಿಯತನದ ನಾತೆಯಲ್ಲಿ ಆ ಇಬ್ಬರು ಯುವತಿಯರಿಗೆ ಹೇಳಿದರು, “ನೀವಿಬ್ಬರೂ ನನ್ನ ಹಿರಿಯ ಮಗಳಿಗಿಂತಲೂ ಕಿರಿಯರು. ಆದ್ದರಿಂದ ಒಬ್ಬ ತಂದೆಯಾಗಿ ಹೇಳುತ್ತಿದ್ದೇನೆ, ಇದು ಶೋಕ ಮಾಡುವ ಸಮಯವಲ್ಲ ಎಂಬುದು ನಿಮಗೂ ತಿಳಿಯುತ್ತಿಲ್ಲವೇ? ಅಂತಹ ರಹಸ್ಯವೇನಿದೆ ಎಂದು ನೀವಿಬ್ಬರೂ ಇಷ್ಟು ಮುತ್ಸದ್ದಿಗಳಾಗಿದ್ದರೂ ಕೂಡ ಹೀಗೆ ಪ್ರಜ್ಞೆ ಕಳೆದು ಕುಳಿತಿದ್ದೀರಿ?”
ಆ ಮಾತಿಗೆ ಇಬ್ಬರೂ ಚೇತರಿಸಿಕೊಂಡರು. ಮೋತಿಬಾಯಿ ಎಲ್ಲರಿಗೂ ಹೇಳಿದರು, “ರಾಣಿ ಲಕ್ಷ್ಮೀಬಾಯಿಯು ತಾನು ಮರಣ ಹೊಂದಿದರೆ, ನಮ್ಮಂತಹ ಸಹಚರರಿಗೆ ಸಹಾಯವಾಗಲಿ ಎಂದು ಕಾಶೀಬಾಯಿಯ ಬಳಿಯೇ ತನ್ನ ಆಭರಣಗಳು, ವಸ್ತ್ರಗಳು ಮತ್ತು ಚಿನ್ನದ ಮೊಹರುಗಳಿಂದ ತುಂಬಿದ ಹಂಡೆಯನ್ನು ನೀಡಿಟ್ಟಿದ್ದಾರೆ. ಈ ದುಃಖದ ನೆನಪಿನಿಂದಾಗಿ ಲಕ್ಷ್ಮೀಬಾಯಿಯ ಮಹನತೆ ಹೆಚ್ಚಾಗಿ ಅರಿವಾಯಿತು, ಹಾಗಾಗಿ ಅಳು ಬಂದಿತು.”
ಕಾಶೀಬಾಯಿ ಶಾಂತವಾಗಿ ಇವರೆಲ್ಲರನ್ನೂ ಕರೆದುಕೊಂಡು ದುರ್ಗಾದೇವಿಯ ದೇವಸ್ಥಾನದ ಹಿಂದಿರುವ ತನ್ನ ಮನೆಗೆ ಹೋದಳು. ಅಲ್ಲಿ ಆರು ವರ್ಷದ ದಾಮೋದರರಾವ್ನನ್ನು ಆಟವಾಡಿಸುತ್ತಾ ಕಾಶೀಬಾಯಿಯ ತಾಯಿ ಗಂಗಾಬಾಯಿ ಕುಳಿತಿದ್ದರು. ಈ ಗಂಗಾಬಾಯಿಯನ್ನು ಕಳೆದ ಎರಡು ತಿಂಗಳಿಂದಲೇ ಮೊರೋಪಂತರು ಈ ಹಳ್ಳಿಗೆ ಕರೆತಂದು ಇರಿಸಿದ್ದರು. ‘ಗಂಗಾಬಾಯಿಗೆ ಒಬ್ಬ ಹುಚ್ಚಿ ವಿಧವೆ ಮಗಳಿದ್ದಾಳೆ’ ಎಂಬ ಸುದ್ದಿ ಊರಿನ ಪ್ರತಿಯೊಬ್ಬರಿಗೂ ತಿಳಿದಿತ್ತು. ಮೊರೋಪಂತರು ಗಂಗಾಬಾಯಿಗೆ ‘ಒಬ್ಬ ಶ್ರೀಮಂತ ಮತ್ತು ದಾನಶೀಲ ಧಾರ್ಮಿಕ ಸ್ವಭಾವದ ವಿಧವೆಯ’ ರೂಪ ಕೊಟ್ಟಿದ್ದರು. ಅವಳು ಬನಾರಸ್ನ ಒಬ್ಬ ಸಾಧುವಿನ ಆದೇಶದಂತೆ, ಪಲಧಾಡಿ ಹಳ್ಳಿಯ ದುರ್ಗಾದೇವಿಯ ಸೇವೆಗಾಗಿ ಬಂದು ಉಳಿದಿದ್ದಾಳೆ ಎಂದು ಜನ ನಂಬಿದ್ದರು.
ಗಂಗಾಬಾಯಿಗೆ ಮೋತಿಬಾಯಿಯಿಂದ ಲಮಾಣಿಗಳ ದನಕರುಗಳ ಸಮಸ್ಯೆ ತಿಳಿದ ಕೂಡಲೇ ಅವಳು ತನ್ನ ಮಗಳಾದ ಕಾಶೀಬಾಯಿಗೆ ಹೇಳಿದಳು, “ಕಳೆದ ಎರಡು ತಿಂಗಳಲ್ಲಿ ಶ್ರೀಮಂತ ಮೊರೋಪಂತರು ನನ್ನನ್ನು ಚೆನ್ನಾಗಿ ತಯಾರು ಮಾಡಿದ್ದಾರೆ. ನಾನು ಊರಿನವರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ. ನಾನು ಊರಿನಲ್ಲಿ ಹೇಳಿದ್ದೇನೆ, ಇವಳಿಗೆ ‘ದೆವ್ವ ಹಿಡಿದಿದೆ’ ಎಂದು. ಭೂತವು ಹಸು ಮತ್ತು ಎಮ್ಮೆಗಳನ್ನು ಲಮಾಣಿ ಪಂಗಡಕ್ಕೆ ದಾನ ಮಾಡಲು ಹೇಳಿದೆ, ಏಕೆಂದರೆ ಭೂತವು ಲಮಾಣಿ ಜಾತಿಯ ಹೆಂಗಸಿನದ್ದಾಗಿದೆ ಎಂದು ಇಂದು ನಾನು ಹೇಳುತ್ತೇನೆ. ನಾನು ಬೆಳ್ಳಂಬೆಳಗ್ಗೆ ಹಸು-ಎಮ್ಮೆಗಳನ್ನು ಸಂಗ್ರಹಿಸುತ್ತೇನೆ, ಅಂದರೆ ಕೊಂಡುಕೊಳ್ಳುತ್ತೇನೆ ಮತ್ತು ಅವುಗಳನ್ನು ಈ ಲಮಾಣಿ ತಂಡಕ್ಕೆ ದಾನವಾಗಿ ಕೊಡುತ್ತೇನೆ. ಆದರೆ ಅದಕ್ಕಾಗಿ ಒಬ್ಬ ಮಾಂತ್ರಿಕ ಎಲ್ಲಿಂದ ಸಿಗುತ್ತಾನೆ?”
ಲಾಲಾಭಾವು ಬಕ್ಷಿ ತಕ್ಷಣವೇ ಸಿದ್ಧರಾದರು ಮತ್ತು ಲಮಾಣಿ ವೇಷವನ್ನು ಕಳಚಿ, ಕಪ್ಪು ನಿಲುವಂಗಿಯ ಮಾಂತ್ರಿಕನ ರೂಪ ಧರಿಸಿದರು.
ಹಗಲು ಹೊತ್ತಿನಲ್ಲೇ ಈ ಲಮಾಣಿ ತಂಡಕ್ಕೆ ಸಾಕಷ್ಟು ದನಕರುಗಳು ಸಿಕ್ಕವು. ಯಾವ ಹಳ್ಳಿಗನ ಮನಸ್ಸಿನಲ್ಲೂ ಈ ಲಮಾಣಿಗಳ ಹತ್ತಿರ ಮೊದಲು ದನಕರುಗಳು ಇರಲಿಲ್ಲ ಎಂಬ ಸಂಶಯ ಬರಲಿಲ್ಲ. ಏಕೆಂದರೆ ‘ಅವರ ದನಕರುಗಳನ್ನು ತೆಗೆದುಕೊಂಡು ಒಬ್ಬ ಲಮಾಣಿ ಕಾಡಿಗೆ ಬೆಳ್ಳಂಬೆಳಗ್ಗೆಯೇ ಹೋಗಿದ್ದಾನೆ’ ಎಂದು ಗಂಗಾಬಾಯಿಯೇ ಹೇಳಿದ್ದರು.
ದನಕರುಗಳ ದಾನವು ಮಾಂತ್ರಿಕನ ಮುಖಾಂತರ ಮುಗಿಯುತ್ತಿದ್ದಂತೆಯೇ, ಗಂಗಾಬಾಯಿಯ ಮಗಳು ಕಾಶೀಬಾಯಿಯ ದೆವ್ವದ ಬಾಧೆ ಸಂಪೂರ್ಣವಾಗಿ ಗುಣವಾಯಿತು ಮತ್ತು ಅವಳು ಒಂದು ಕ್ಷಣದಲ್ಲಿ ಸುಧಾರಿಸಿಕೊಂಡಳು. ಅದರ ಬೆನ್ನಲ್ಲೇ ಆ ಮಾಂತ್ರಿಕನ ಪಾದಕ್ಕೆ ಬೀಳಲು ಗ್ರಾಮಸ್ಥರು ಮುಗಿಬಿದ್ದರು.
ಅನುಭವಿ ಲಾಲಾಭಾವು ಬಕ್ಷಿ ಅವರು ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿ ‘ಊರಿನವರು ತನ್ನ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಮತ್ತು ಇದರ ಲಾಭ ಪಡೆಯಬೇಕು’ ಎಂದು ನಿರ್ಧರಿಸಿದರು. ಅವರು ಮೋತಿಬಾಯಿ ಮತ್ತು ಸರ್ದಾರ್ ಪಹಾಡಿ ಅವರ ಜೊತೆ ಕುಳಿತು ಮುಂದಿನ ಕೆಲಸಕ್ಕೆ ಬೇಕಾದ ಎಲ್ಲಾ ವಸ್ತುಗಳ ಪಟ್ಟಿಯನ್ನು (List) ಸಿದ್ಧಪಡಿಸಿದರು ಮತ್ತು ಹಳ್ಳಿಗರ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನೆಪದಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ರಾತ್ರಿಯ ಹೊತ್ತಿಗೆ ಸಂಗ್ರಹಿಸಿದರು. ಮುಂದಿನ ವಿಷಯ ಎಲ್ಲಕ್ಕಿಂತ ಮುಖ್ಯವಾಗಿತ್ತು, ಅದು ಅ೦ದರೆ ಶಸ್ತ್ರಾಸ್ತ್ರಗಳು - ತಲವಾರುಗಳು ಮತ್ತು ಬಂದೂಕುಗಳು, ಆದರೆ ಆ ಪ್ರಶ್ನೆಯನ್ನು ಕೂಡ ಕಾಶೀಬಾಯಿ ಬಗೆಹರಿಸಿದಳು.
‘ಪಕ್ಕದ ಹಳ್ಳಿಯ ಒಬ್ಬ ದುರಾಸೆಯ ಸಾಹುಕಾರನ ಹತ್ತಿರ ದರೋಡೆಕೋರರು ಬರುತ್ತಿರುತ್ತಾರೆ ಮತ್ತು ಅವನೇ ಶಸ್ತ್ರಾಸ್ತ್ರಗಳನ್ನು ಮಾರುತ್ತಾನೆ’ ಎಂದು ಅವಳು ತಿಳಿಸಿದಳು. ರಾತ್ರಿಯ ಹೊತ್ತಿನಲ್ಲಿ ರಾಣಿ ಲಕ್ಷ್ಮೀಬಾಯಿಯ ಹಣವನ್ನೇ ನೀಡಿ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಯಿತು ಮತ್ತು ಮರುದಿನ ಬೆಳಿಗ್ಗೆ ಈ ಲಮಾಣಿಗಳ ತಂಡವು ದನಕರುಗಳ ಸಮೇತ ಮುಂದಿನ ಪ್ರಯಾಣಕ್ಕೆ ಹೊರಟಿತು. ಮಾಂತ್ರಿಕನು ಅಲ್ಲಿಂದ ಹೋಗುವಾಗ ಗ್ರಾಮದ ಪ್ರತಿಯೊಬ್ಬರಿಗೂ ಒಂದೊಂದು ತಾಯಿತವನ್ನು ಮಂತ್ರಿಸಿ ಕೊಟ್ಟನು ಮತ್ತು ಎಂಟು ಗಂಟೆಗಳ ಕಾಲ ಮನೆ ಬಾಗಿಲು ಹಾಕಿ ಒಳಗೇ ಕುಳಿತುಕೊಳ್ಳಲು ಹೇಳಿದನು.
ಗಂಗಾಬಾಯಿ, ಗುಣಮುಖಳಾದ ಕಾಶೀಬಾಯಿ ಮತ್ತು ಅವಳ ಪುಟ್ಟ ಮಗ, ಹೀಗೆ ಮೂವರೂ ಆ ಮಾಂತ್ರಿಕನ ಜೊತೆಯಲ್ಲೇ ಹೊರಟರು. ಅವರ ಬಳಿಯಿದ್ದ ಎಲ್ಲಾ ಸಾಮಾನುಗಳು ಅಂದರೆ ಶಸ್ತ್ರಾಸ್ತ್ರಗಳು, ಲಮಾಣಿಗಳ ಕತ್ತೆಗಳ ಬೆನ್ನ ಮೇಲಿದ್ದವು. ಪ್ರತಿಯೊಬ್ಬರ ಮನಸ್ಸಿನಲ್ಲಿ ಸೇಡಿನ ಕಿಚ್ಚು ಇತ್ತು. ಕಾಶೀಬಾಯಿ ಮತ್ತು ಮೋತಿಬಾಯಿ ಮಾತ್ರ ಅತ್ಯಂತ ಶಾಂತ ಮನಸ್ಸಿನಿಂದ ಆದರೆ ತೀವ್ರವಾದ ಸೇಡಿನ ಭಾವನೆಯಿಂದ ಆಲೋಚಿಸುತ್ತಿದ್ದರು.
ಪಲಧಾಡಿ ಹಳ್ಳಿಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಆ ಲಮಾಣಿ ತಂಡವು ತಮ್ಮ ದಿಕ್ಕನ್ನು ಬದಲಿಸಿತು. ಕಾಶೀಬಾಯಿಗೆ ದುಲ್ಹೇರಾವ್ನ ಅಡಗುದಾಣ ಚೆನ್ನಾಗಿ ತಿಳಿದಿತ್ತು, ಏಕೆಂದರೆ ಅವಳು ಕೂಡ ಗುಪ್ತಚರಿಯಾಗಿದ್ದಳು.
ಮೂರು ದಿನಗಳ ಪ್ರಯಾಣವನ್ನು ಮುಗಿಸಿ ಈ ಲಮಾಣಿ ತಂಡವು ದುಲ್ಹೇರಾವ್ನ ವಾಡೆಯ ಮುಂದಿರುವ ಬಯಲು ಪ್ರದೇಶದಲ್ಲಿ ಡೇರೆಗಳನ್ನು ಹಾಕಲು ಶುರು ಮಾಡಿತು. ಆದರೆ ಈ ಬಾರಿ ಈ ತಂಡದಲ್ಲಿ ಸುಮಾರು ೫೦-೬೦ ಮಂದಿ ಇದ್ದರು. ರಾಣಿ ಲಕ್ಷ್ಮೀಬಾಯಿಯ ‘ದುರ್ಗಾದಲ’ ಮತ್ತು ‘ಮಹಾದೇವಶಿವದಲ’ದ ಚದುರಿಹೋಗಿದ್ದ ಸ್ತ್ರೀ-ಪುರುಷರು ಇವರನ್ನು ಬಂದು ಸೇರಿಕೊಂಡಿದ್ದರು. ಮುಖ್ಯವಾಗಿ ಸರ್ದಾರ್ ಮಂಜುನಾಥ ಪಹಾಡಿ ಅವರಿಗೆ ಲಮಾಣಿ ಭಾಷೆ ಚೆನ್ನಾಗಿ ಬರುತ್ತಿತ್ತು ಮತ್ತು ಉಳಿದವರಿಗೂ ಅವರು ಕಲಿಸಿ ಸಿದ್ಧಪಡಿಸಿದ್ದರು.
ನೋಡಲು ಅತ್ಯಂತ ಸುಂದರವಾಗಿದ್ದ ಮತ್ತು ಮಿಂಚಿನಂತೆ ಯಾರ ಮೇಲಾದರೂ ಎರಗಬಲ್ಲ ೨೫ ವರ್ಷದ ಕಾಶೀಬಾಯಿ ದುಲ್ಹೇರಾವ್ನ ಮನೆಯಲ್ಲಿ, ‘ಹಾಲು ಮಾರುವ ಲಮಾಣಿ ಸ್ತ್ರೀ’ಯಾಗಿ ನಿರ್ಭಯವಾಗಿ ಓಡಾಡತೊಡಗಿದಳು.
(ಕಥೆ ಮುಂದುವರಿಯುವುದು)
