Friday, 25 July 2025

ಮೋದ-ಕ

ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ 'ಪ್ರತ್ಯಕ್ಷ'ದ ಅಗ್ರಲೇಖನ (06-09-2006)

ಶ್ರೀಗಣಪತಿಯ ನೆನಪಾದ ತಕ್ಷಣ ಪ್ರತಿಯೊಬ್ಬ ಭಕ್ತನಿಗೆ ಅಥವಾ ನಾಸ್ತಿಕನಿಗೂ ತಕ್ಷಣ ನೆನಪಾಗುವುದೇ ಮೋದಕ. ಇತ್ತೀಚಿನ ದಿನಗಳಲ್ಲಿ ಖೋವಾ ಮೋದಕಗಳು ಸಿಗುತ್ತವೆ, ಆದರೆ ಈ ಖೋವಾ ಮೋದಕ ಅಂದರೆ ಯಾವುದೆ ಕಡಿಮೆ ಗುಣಮಟ್ಟದ ವಸ್ತುವಿನಿಂದ ತೃಪ್ತಿಪಡುವ ಹಾಗೆ. ಚಿಕ್ಕಂದಿನಿಂದ ಇಂದಿನವರೆಗೂ ನಾನು ಅತ್ಯಂತ ಇಷ್ಟಪಟ್ಟು ತಿಂದ ಮೋದಕವೆಂದರೆ ಸಾಂಪ್ರದಾಯಿಕ ಮೋದಕ. ಇದರಲ್ಲಿ ಅಕ್ಕಿ ಹಿಟ್ಟನ್ನು ಬೆಣ್ಣೆಯಲ್ಲಿ ಕಲಸಿ, ಒಳಗಿನ ಮಿಶ್ರಣವನ್ನು ತಾಜಾ ಮತ್ತು ರುಚಿಕರವಾದ ತೆಂಗಿನಕಾಯಿ ತುರಿಯಿಂದ ಮನೆಯಲ್ಲೇ ಮಾಡಿದ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಇನ್ನೂ ಹೆಚ್ಚೆಂದರೆ, ಮೋದಕವನ್ನು ತಿನ್ನುವಾಗ ಅದನ್ನು ಒಡೆದು ಅದರಲ್ಲಿ ಮತ್ತೊಂದು ಚಮಚ ತುಪ್ಪವನ್ನು ಹಾಕಿಕೊಳ್ಳುವುದು. ಎಲ್ಲಾ ಮಕ್ಕಳಿಗೆ ಈ 'ತುಪ್ಪದಲ್ಲಿ ತೊಯ್ದ' ಮೋದಕವೆಂದರೆ ಬಲು ಇಷ್ಟ. ಈ ಸಾಂಪ್ರದಾಯಿಕ ಮೋದಕವು ಆಹಾರದಲ್ಲಿನ ಸೌಮ್ಯ, ಸ್ನಿಗ್ಧ ಮತ್ತು ಗುರು ಗುಣಗಳ ಪರಮೋಚ್ಛ ಸ್ಥಿತಿ. ಅದಕ್ಕಾಗಿಯೇ ಅತ್ಯುಷ್ಣ, ಅರ್ಧಸ್ನಿಗ್ಧ ಮತ್ತು ಲಘು ಸ್ಥಾನವನ್ನು ನಿಯಂತ್ರಿಸುವ ಮೂಲಾಧಾರ ಚಕ್ರದ ಅಧಿಪತಿಯಾದ ಶ್ರೀ ಮಹಾಗಣಪತಿಗೆ ಇದು ಸರ್ವೋತ್ತಮ ನೈವೇದ್ಯ.

ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇಂತಹ ಮೋದಕಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ಸಾಧ್ಯವಿದ್ದವರು ಇಂತಹ ಸಾಂಪ್ರದಾಯಿಕ ಮೋದಕಗಳನ್ನು ಮಾಡಿ ಅದನ್ನು ಅತ್ಯಂತ ಪ್ರೀತಿಯಿಂದ ಶ್ರೀ ಮಹಾಗಣಪತಿಗೆ ಅರ್ಪಿಸಬೇಕು. ದೂರ್ವೆ ಮತ್ತು ಶಮಿ ಪತ್ರೆಗಳ ಬಾಹ್ಯ ಪೂಜೆ (ಶ್ರೀಗಣಪತಿಗೆ ದೂರ್ವೆ ಮತ್ತು ಶಮಿ ಪತ್ರೆಗಳನ್ನು ಅರ್ಪಣೆ ಮಾಡುವದು) ಮತ್ತು ಸಾಂಪ್ರದಾಯಿಕ ಮೋದಕಗಳ ನೈವೇದ್ಯವು ನಿಜವಾಗಿಯೂ ಉಗ್ರ, ಶುಷ್ಕ ಮತ್ತು ಲಘು ಗುಣಗಳನ್ನು ನಾಶಮಾಡಿ ಸೌಮ್ಯತೆ, ಸ್ನಿಗ್ಧತೆ ಮತ್ತು ಗುರುತ್ವವನ್ನು (ಸ್ಥಿರತೆ) ಸ್ಥಾಪಿಸುವದು ಇರುವದರಿಂದ ಆ ಮಂಗಳಮೂರ್ತಿ ವರದವಿನಾಯಕನು ವಿಘ್ನಗಳನ್ನು ನಾಶಮಾಡಲು ಪ್ರತಿಯೊಬ್ಬರ ಪ್ರಾಣಮಯ ದೇಹ ಮತ್ತು ಮನೋಮಯ ದೇಹದಲ್ಲಿ ಅವತರಿಸುತ್ತಾನೆ.


ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಗೆ ಗಣಪತಿ ಆಗಮನ.
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಗೆ ಗಣಪತಿ ಆಗಮನ.

ಮೋದಕ ಎಂದೊಡನೆ ನನಗೆ ಬಹಳ ಹಳೆಯ ಕಥೆಯೊಂದು ನೆನಪಾಗುತ್ತದೆ. ಒಬ್ಬ ಚಕ್ರವರ್ತಿ ಇದ್ದ. ಅವನು ಸ್ವತಃ ಅತ್ಯಂತ ವಿಲಾಸಿ ಸ್ವಭಾವದವನಾಗಿದ್ದನು ಮತ್ತು ಯಾವುದೇ ರೀತಿಯ ಶಿಕ್ಷಣವನ್ನು ಪಡೆದಿರಲಿಲ್ಲ. ಹಾಗಾಗಿ ಅವನ ತಂದೆಯು ಅವನನ್ನು ಪಟ್ಟಕ್ಕೆ ಏರಿಸುವಾಗ, ಆ ವಿದ್ಯೆಯಿಲ್ಲದ ರಾಜಕುಮಾರನಿಗೆ ಅತ್ಯಂತ ವಿದ್ವಾಂಸಳಾದ ಮತ್ತು ಸುಜ್ಞಾನಿಯಾದ ರಾಜಕುಮಾರಿಯೊಂದಿಗೆ ವಿವಾಹ ಮಾಡಿಸಿದ್ದರು. ಹೀಗೆ, ಆ ಅನಕ್ಷರಸ್ಥ ರಾಜ ಮತ್ತು ಅವನ ವಿದ್ವಾಂಸ, ಪತಿವ್ರತೆಯಾದ ರಾಣಿಯು ಸಂಪೂರ್ಣ ರಾಜಪರಿವಾರದೊಂದಿಗೆ ಸರೋವರದಲ್ಲಿ ಜಲಕ್ರೀಡೆಗೆ ಹೋಗಿದ್ದರು. ಅಲ್ಲಿ ಸರೋವರದಲ್ಲಿ ಜಲಕ್ರೀಡೆ ಆಡುತ್ತಿರುವಾಗ, ರಾಜನು ರಾಣಿಯ ಮೇಲೆ ಕೈಯಿಂದ ನೀರನ್ನು ಎರಚತೊಡಗಿದನು. ವಿವಾಹದವರೆಗೂ ಸಂಸ್ಕೃತವೇ ಅಧ್ಯಯನ ಮತ್ತು ಮಾತನಾಡುವ ಭಾಷೆಯಾಗಿದ್ದ ಆ ರಾಣಿಯು ತಟ್ಟನೆ, “ಮೋದಕೈಃ ಸಿಂಚ” ಎಂದಳು. ತಕ್ಷಣವೇ ರಾಜನು ಸೇವಕನನ್ನು ಹತ್ತಿರ ಕರೆದು ಅವನ ಕಿವಿಯಲ್ಲಿ ಏನನ್ನೋ ಹೇಳಿದನು. ಸ್ವಲ್ಪ ಹೊತ್ತಿನಲ್ಲಿ ಸೇವಕನು ಮೋದಕಗಳನ್ನು ತುಂಬಿದ ಐದಾರು ಪಾತ್ರೆಗಳನ್ನು ಅಲ್ಲಿಗೆ ತಂದನು ಮತ್ತು ರಾಜನು ಒಂದರ ನಂತರ ಒಂದರಂತೆ ಮೋದಕಗಳನ್ನು ರಾಣಿಯ ಮೇಲೆ ಗುರಿಯಿಟ್ಟು ಎಸೆಯಲಾರಂಭಿಸಿದನು. ಈ ವಿಚಿತ್ರ ಘಟನೆಯಿಂದ ಮೊದಲು ಸಂಪೂರ್ಣವಾಗಿ ಗೊಂದಲಕ್ಕೊಳಗಾದ ರಾಣಿಯು, ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡು ಇತರ ರಾಜಸ್ತ್ರೀಯರು ಮತ್ತು ಮಂತ್ರಿಗಳು ಸೇರಿದಂತೆ ರಾಜಪರಿವಾರದ ಸದಸ್ಯರ ಮುಖದಲ್ಲಿದ್ದ ಕುಹಕದ ನಗುವನ್ನು ನೋಡಿ ಅತ್ಯಂತ ಲಜ್ಜಿತ ಮತ್ತು ದುಃಖಿತಳಾದಳು; ಏಕೆಂದರೆ ರಾಣಿಗೆ ಹೇಳಬೇಕಾಗಿದ್ದು, “ಮಾ ಉದಕೈಃ ಸಿಂಚ” ಅಂದರೆ, ‘ನನ್ನನ್ನು ನೀರಿನಿಂದ ತೋಯಿಸಬೇಡ.’ ಆದರೆ ಕೇವಲ ಸಂಸ್ಕೃತ ಮಾತನಾಡುವುದನ್ನು ಮಾತ್ರ ತಿಳಿದಿದ್ದ ಆ ಅನಕ್ಷರಸ್ಥ ರಾಜನಿಗೆ ಸಂಸ್ಕೃತದ ವ್ಯಾಕರಣ ನಿಯಮಗಳು ತಿಳಿದಿಲ್ಲದ ಕಾರಣ, 'ಮೋದಕೈಃ' ಎಂಬುದನ್ನು ವಿಭಜಿಸದೆ ತಪ್ಪಾಗಿ ಅರ್ಥಮಾಡಿಕೊಂಡಿದ್ದ. ಮುಂದೆ ಕಥೆಯು ಬೇರೆಯೇ ತಿರುವು ಪಡೆಯುತ್ತದೆ, ಆದರೆ ನನಗಂತೂ ರಾಣಿಯ ಮೇಲೆ ಮೋದಕಗಳ ಮಳೆಗರೆದ ಆ ಮೂರ್ಖ ರಾಜನೇ ಇಂದಿನ ದಿನಗಳಲ್ಲಿ ಅನೇಕ ರೂಪಗಳಲ್ಲಿ ಅಲ್ಲಲ್ಲಿ ಓಡಾಡುತ್ತಿರುವಂತೆ ಕಾಣುತ್ತಾನೆ.

ನಾನು ಮೋದಕ ನೈವೇದ್ಯವನ್ನು ಅರ್ಪಿಸುತ್ತೇನೆ.
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಯಲ್ಲಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವದಲ್ಲಿ, ಗಣಪತಿ ಬಾಪ್ಪಾಗೆ ಪ್ರೀತಿಯಿಂದ ಮೋದಕ ನೈವೇದ್ಯ ಅರ್ಪಿಸಲಾಗುತ್ತದೆ.

ಗಣಪತಿಗೆ ಮೋದಕ ಮತ್ತು ದೂರ್ವೆ ಇಷ್ಟವೆಂದು ಆದರದಿಂದ ಆ ವಸ್ತುಗಳನ್ನು ಅರ್ಪಿಸುವುದು ಸರಿಯಾದುದೇ. ಹಾಗೆಯೇ ಆ ಪರಮಾತ್ಮನ ರೂಪಗಳು ಅನೇಕವಾಗಿರುವುದರಿಂದ ವಿವಿಧ ಸ್ವರೂಪಗಳ ಮೂರ್ತಿಗಳನ್ನು ಮಾಡುವುದೂ ಅತ್ಯಂತ ಯೋಗ್ಯವೇ. ಆದರೆ ಆ ಗಣಪತಿಗೆ ಹಾಲು ಕುಡಿಸಲು ಅಲ್ಲಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ಆ ರಾಜನ ಪುನರಾವರ್ತನೆಯೇ ಸರಿ. ನನಗೆ ಒಂದು ಅರ್ಥವಾಗುವುದಿಲ್ಲ, ನಿಜವಾಗಿಯೂ ಗಣಪತಿಗೆ ಮೋದಕ ಅತ್ಯಂತ ಪ್ರಿಯವಾಗಿರುವಾಗ, ಅವನು ಅಲ್ಲಲ್ಲಿ ಹಾಲನ್ನು ಮಾತ್ರ ಏಕೆ ಕುಡಿಯುತ್ತಾನೆ? ಮೋದಕವನ್ನು ಏಕೆ ತಿನ್ನುವುದಿಲ್ಲ? ಮತ್ತು ಮುಖ್ಯವಾಗಿ, ಈ ಪ್ರಶ್ನೆಯು ನಮ್ಮಲ್ಲಿ ಯಾರಿಗೂ ಮೂಡುವುದಿಲ್ಲ. ಆ ಮಂಗಳಮೂರ್ತಿ ಪರಮಾತ್ಮನು ಭಕ್ತರು ಅತ್ಯಂತ ಪ್ರೀತಿಯಿಂದ ಅರ್ಪಿಸಿದ ಹಳಸಿದ ರೊಟ್ಟಿಯ ತುಂಡುಗಳನ್ನು ಕೂಡ ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ, ಇದರಲ್ಲಿ ನನಗೆ ಸ್ವಲ್ಪವೂ ಸಂಶಯವಿಲ್ಲ. ಮೂರ್ತಿಯ ಮುಂದಿರುವ ನೈವೇದ್ಯದ ತಟ್ಟೆಯಲ್ಲಿ ಒಂದು ಕಣವೂ ಕಡಿಮೆಯಾಗಿ ಕಾಣದಿದ್ದರೂ ಪರವಾಗಿಲ್ಲ. ಗೀತೆಯಲ್ಲಂತೂ ಸಾಕ್ಷಾತ್ ಭಗವಾನ್ ಶ್ರೀಕೃಷ್ಣನೇ ಸ್ವತಃ ತನ್ನ ಬಾಯಿಯಿಂದಲೇ ಈ ಭರವಸೆಯನ್ನು ಎಲ್ಲಾ ಭಕ್ತರಿಗೆ ನೀಡಿದ್ದಾನೆ. ಮುಖ್ಯವಾಗಿ, ಪರಮಾತ್ಮನಿಗೆ ಇಂತಹ ಕೆಲಸಗಳನ್ನು ಮಾಡಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿಲ್ಲ, ಹಾಗೆಯೇ ಜನರ ಮನಸ್ಸಿನಲ್ಲಿ ಭಕ್ತಿಯನ್ನು ಹೆಚ್ಚಿಸಲು ಪರಮಾತ್ಮನಿಗೆ ಇಂತಹ ಉಪಾಯಗಳ ಅಗತ್ಯವೂ ಇಲ್ಲ. ಭಕ್ತ ಮತ್ತು ಅಭಕ್ತ ಪ್ರತಿಯೊಬ್ಬರ ಸಂಪೂರ್ಣ ಅಸ್ತಿತ್ವದ ಪೂರ್ಣ ಅರಿವಿರುವ ಮತ್ತು ಪ್ರತಿಯೊಬ್ಬರ ಕರ್ಮದ ಫಲವು ಯಾರ ಕೈಯಲ್ಲಿದೆಯೋ, ಆ ನಿಜವಾದ ಪರಮಾತ್ಮನಿಗೆ ಇಂತಹ ವಿಚಿತ್ರ ವಿಷಯಗಳ ಅವಶ್ಯಕತೆ ಎಂದಿಗೂ ಇರುವುದಿಲ್ಲ.


ಅಗ್ರಲೇಖನವನ್ನು ಮುಕ್ತಾಯಗೊಳಿಸುತ್ತಾ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ಮಿತ್ರರೇ, ಆ ಪರಮಾತ್ಮನಿಗೆ ಬೇಕಾಗಿರುವುದು ನಿಮ್ಮ ಅಚಲ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯ ಭಾವದಿಂದ ಮಾಡಿದ ದೇವರ ಮತ್ತು ದೇವರ ಅಸಹಾಯಕ ಮಕ್ಕಳ ಸೇವೆ. ಇದೇ ನಿಜವಾದ ನೈವೇದ್ಯ. ಅಲ್ಲ, ಇದೇ ಶ್ರೇಷ್ಠ ನೈವೇದ್ಯ. ಅದನ್ನು ಪರಮಾತ್ಮನು ಪೂರ್ತಿಯಾಗಿ ಸ್ವೀಕರಿಸುತ್ತಾನೆ ಮತ್ತು ಅದರ ಸಾವಿರ ಪಟ್ಟು ಫಲವನ್ನು ಪ್ರಸಾದವಾಗಿ ಭಕ್ತನಿಗೆ ನೀಡುತ್ತಾನೆ. ಮೋದಕವನ್ನು ನೈವೇದ್ಯವಾಗಿ ಖಂಡಿತ ಅರ್ಪಿಸಿ ಮತ್ತು ಇಷ್ಟಪಟ್ಟು ನೀವೂ ತಿನ್ನಿರಿ, ಆದರೆ ‘ಮೋದ’ ಎಂದರೆ ‘ಆನಂದ’ ಎಂಬುದನ್ನು ಮರೆಯಬೇಡಿ. ಪರಮಾತ್ಮನಿಗೆ ಮತ್ತು ಇತರರಿಗೆ ಆನಂದವಾಗುವಂತೆ ವರ್ತಿಸುವುದೇ ಶ್ರೇಷ್ಠ ಮೋದಕವಾಗಿದೆ.'
मराठी >> हिंदी >> English >> ગુજરાતી>> తెలుగు>> বাংলা>> தமிழ்>>

Wednesday, 23 July 2025

ಸದ್ಗುರುವಿನಲ್ಲಿಯ ಅಚಲ ವಿಶ್ವಾಸ ಎಲ್ಲವನ್ನೂ ಮಾಡಬಹುದು! - ಶುಭಾವೀರಾ ತ್ರಾಸಿ, ಹಾಂಗ್ ಕಾಂಗ್

ಸದ್ಗುರುವಿನಲ್ಲಿಯ ಅಚಲ ವಿಶ್ವಾಸ ಎಲ್ಲವನ್ನೂ ಮಾಡಬಹುದು!   -   ಶುಭಾವೀರಾ ತ್ರಾಸಿ, ಹಾಂಗ್ ಕಾಂಗ್

'ಸ್ವಂತ ಆತ್ಮವಿಶ್ವಾಸ ಮತ್ತು ನಮ್ಮ ಸದ್ಗುರುವಿನ ಮೇಲಿನ ಅಚಲ ವಿಶ್ವಾಸ ಈ ಎರಡೂ ವಿಷಯಗಳು ಜೀವನದಲ್ಲಿ ಅವಶ್ಯಕವಾಗಿವೆ'. ಈ ಶ್ರದ್ಧಾವಂತ ಮಹಿಳೆಯ ಈ ಮಾತುಗಳು ಅತ್ಯಂತ ಮುಖ್ಯವಾಗಿವೆ. ಮೂಲತಃ, ಸದ್ಗುರುಗಳ ಮೇಲಿನ ಅಚಲ ವಿಶ್ವಾಸವೇ ನಮ್ಮ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಈ ಅನುಭವದಿಂದ ತಿಳಿಯುತ್ತದೆ.

============

ಹರಿ ಓಂ. ಸದ್ಗುರು ಅನಿರುದ್ಧ ಬಾಪು ಅವರ ಕೃಪಾ ಛಾಯೆ ನನ್ನ ಸಂಪೂರ್ಣ ಕುಟುಂಬದ ಮೇಲೆ ನಿರಂತರವಾಗಿರುವುದು ನಮ್ಮ ಪರಮ ಭಾಗ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಪತಿ ವಿರಾಜಸಿಂಗ್ ತ್ರಾಸಿ, ಮಗ ಗೌರವಸಿಂಗ್ ತ್ರಾಸಿ ಮತ್ತು ನಾನು ಹಾಂಗ್ ಕಾಂಗ್‌ನಲ್ಲಿ ವಾಸಿಸುತ್ತೇವೆ. ಹಾಂಗ್ ಕಾಂಗ್‌ನಲ್ಲಿ ನಾವು ಇಪ್ಪತ್ತು ವರ್ಷಗಳಿಂದ ನೆಲೆಸಿದ್ದೇವೆ (ಅಂದರೆ ಈ ಅನುಭವವನ್ನು ಹೇಳುವಾಗ). ಬಾಪು ಅವರ ಬಳಿ ಬಂದಾಗಿನಿಂದ ನನಗೆ ಅನೇಕ ಅನುಭವಗಳಾಗಿವೆ. ಬಾಪು ಅವರ ಅತಿ ದೊಡ್ಡ ಕೃಪೆ ಏನೆಂದರೆ, ಅವರು ನಮ್ಮ ಬಳಿಗೆ ಯಾವುದೇ ದೊಡ್ಡ ಸಂಕಟವನ್ನು ಎಂದಿಗೂ ಬರಲು ಬಿಟ್ಟಿಲ್ಲ. ಅವರ ಚರಣಗಳಿಗೆ ನಾವು ನಮಸ್ಕರಿಸುತ್ತೇವೆ ಮತ್ತು ಅಂಬಜ್ಞರಾಗಿದ್ದೇವೆ. ಶ್ರೀರಾಮ್.

ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಸಂಕಟಗಳು ಬರುತ್ತವೆ. ನನ್ನ ಜೀವನದಲ್ಲೂ ಅಂತಹ ಅನೇಕ ಏರಿಳಿತಗಳು ಬಂದವು. ಪ್ರತಿ ಬಾರಿ ಬಾಪು ಜೊತೆಗಿದ್ದರಿಂದ ನಾವು  ನಿಶ್ಚಿ೦ತೆ  ಇದ್ದೆವು.

2007 ರಲ್ಲಿ ನಾವು ಹಾಂಗ್ ಕಾಂಗ್‌ನಲ್ಲಿಯೇ ನನ್ನ ಪತಿಯ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಿದೆವು. ಆ ದಿನ ನಾವು ಪ್ರೀತಿಯಿಂದ ಬಾಪು ಅವರ ಪಾದುಕೆಗಳನ್ನು ಪೂಜಿಸಿದೆವು. ಇದರ ತಕ್ಷಣವೇ ನಮ್ಮ ಮನೆಯಲ್ಲಿ ಒಂದು ಭಯಾನಕ ಅಪಘಾತ ಸಂಭವಿಸಿತು. ನನ್ನ ಅತ್ತೆಗೆ ಒಂದು ದಿನ ಬೆಳಿಗ್ಗೆ 11 ಗಂಟೆಗೆ ವಿಪರೀತ ಹಸಿವಾಯಿತು. ಚಳಿಗಾಲವಾಗಿದ್ದರಿಂದ ನಾನು ಅತ್ತೆಗೆ, "ನಾವು ಬಿಸಿಬಿಸಿ ಸಮೋಸ ತಿನ್ನೋಣ" ಎಂದು ಹೇಳಿದೆ. ನಾನು ತಕ್ಷಣ ಅಡುಗೆ ಮನೆಗೆ ಹೋಗಿ ಸಮೋಸ ತಯಾರಿಸಲು ಗ್ಯಾಸ್ ಹಚ್ಚಿದೆ ಮತ್ತು ಒಂದು ಚಿಕ್ಕ ಕಡಾಯಿಯಲ್ಲಿ ಎಣ್ಣೆ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಇಟ್ಟೆ. ಇದ್ದಕ್ಕಿದ್ದಂತೆ ನನಗೆ ಫೋನ್ ರಿಂಗ್ ಕೇಳಿಸಿತು. ಹೋಗಿ ನೋಡಿದರೆ, ಅದು ಒಂದು ತಪ್ಪು ಫ್ಯಾಕ್ಸ್ ಬಂದಿತ್ತು. ನನಗೆ ಫ್ಯಾಕ್ಸ್ ಯಂತ್ರದ ಬಗ್ಗೆ ಮಾಹಿತಿ ಇಲ್ಲದ ಕಾರಣ, ತಪ್ಪಾಗಿ ನಾನು ಒಂದು ಬಟನ್ ಒತ್ತಿದೆ, ಅದರಿಂದ ಫ್ಯಾಕ್ಸ್ ಯಂತ್ರದಿಂದ ಒಂದರ ನಂತರ ಒಂದು ಕಾಗದ ಹೊರಬರಲು ಪ್ರಾರಂಭಿಸಿತು. ನಾನು ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಮೂಲತಃ ಹೆದರುವ ಸ್ವಭಾವದವಳಾದ್ದರಿಂದ ನಾನು ತುಂಬಾ ಭಯಭೀತಳಾದೆ.

ಈ ಗಡಿಬಿಡಿಯಲ್ಲಿ ನಾನು ಗ್ಯಾಸ್ ಹಚ್ಚಿರುವುದನ್ನು ಮರೆತೇಬಿಟ್ಟಿದ್ದೆ. ಇದ್ದಕ್ಕಿದ್ದಂತೆ ಸ್ವಲ್ಪ ಸಮಯದ ನಂತರ ನನಗೆ ಏನೋ ಬಿದ್ದ ಶಬ್ದಗಳು ಕೇಳಿಸತೊಡಗಿದವು. ನಾನು ಕಿಟಕಿಗಳು ತೆರೆದಿದ್ದರಿಂದ ಬಹುಶಃ ಏನಾದರೂ ಕೆಳಗೆ ಬಿದ್ದಿರಬಹುದು ಎಂದು ಯೋಚಿಸಿದೆ. ನಾವು ಮಲಗುವ ಕೋಣೆಯಲ್ಲಿದ್ದೆವು. ನಾನು ಮಲಗುವ ಕೋಣೆಯಿಂದ ಕಿಟಕಿಗಳನ್ನು ಮುಚ್ಚಲು ಹೊರಗೆ ಬಂದಾಗ, ನನಗೆ ಅಡುಗೆಮನೆಯಿಂದ ಹೊಗೆ ಬರುತ್ತಿರುವುದು ಕಾಣಿಸಿತು. ನನ್ನ ಅಡುಗೆಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ತೆರೆಯುತ್ತಿದ್ದಂತೆ ಒಳಗಿನ ಭಯಾನಕ ದೃಶ್ಯವನ್ನು ನೋಡಿದಾಗ, ನನಗೆ ಕಡಾಯಿ ಗ್ಯಾಸ್ ಮೇಲೆ ಇಟ್ಟಿರುವುದು ನೆನಪಾಯಿತು. ನಾನು ಈ ಹಿಂದೆ ಇಂತಹ ದೊಡ್ಡ ಬೆಂಕಿಯನ್ನು ಎಂದಿಗೂ ನೋಡಿರಲಿಲ್ಲ. ನನ್ನ ಇಡೀ ಅಡುಗೆಮನೆ ಹೊಗೆ ಮತ್ತು ಬೆಂಕಿಯಿಂದ ತುಂಬಿತ್ತು. ಬರುತ್ತಿದ್ದ ಶಬ್ದ ಸೀಲಿಂಗ್‌ನಲ್ಲಿದ್ದ ಟ್ಯೂಬ್‌ಲೈಟ್ ಮತ್ತು ಬಲ್ಬ್‌ಗಳ ಒಡೆಯುವ ಶಬ್ದವಾಗಿತ್ತು. ಅವು ಒಡೆದು ಕೆಳಗೆ ಬೀಳುತ್ತಿದ್ದವು ಮತ್ತು ಗ್ಯಾಸ್ ರೇಂಜ್ ಮೇಲಿದ್ದ ಚಿಮಣಿಯ ತುಂಡುಗಳೂ ಸಹ ಸುಟ್ಟು ಕೆಳಗೆ ಬೀಳುತ್ತಿದ್ದವು.

ನಾನು ತುಂಬಾ ಹೆದರಿದ್ದೆ ಮತ್ತು ಬಾಪುಗೆ, 'ಬಾಪು, ನೀವೇ ಎಲ್ಲವನ್ನೂ ಸರಿಪಡಿಸಿ' ಎಂದು ಹೇಳಿದೆ. ಆಗ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ನನ್ನಲ್ಲಿ ಬಂದಿತ್ತು, ನಾನು ಹಿಂದಿನ ಮುಂದಿನ ಯೋಚಿಸದೆ ಅಡುಗೆಮನೆಗೆ ನುಗ್ಗಿ ಗ್ಯಾಸ್ ಬಂದ್ ಮಾಡಿ ಹೊರಗೆ ಬಂದೆ. ಎಲೆಕ್ಟ್ರಿಕಲ್ ಬಾಕ್ಸ್ ನಮ್ಮ ಅಡುಗೆಮನೆಯಲ್ಲಿಯೇ ಇರುತ್ತದೆ. ಅದನ್ನು ಬಂದ್ ಮಾಡುವ ಧೈರ್ಯ ನನಗೆ ಆಗಲಿಲ್ಲ ಏಕೆಂದರೆ ಬೆಂಕಿ ಅಷ್ಟು ಹರಡಿತ್ತು, ನನ್ನ ಮುಂದೆ, ಅಡುಗೆಮನೆಯ ಬಾಗಿಲು ಮುಚ್ಚಿ ಹೊರಗೆ ಬರುವ ಹೊರತು ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಅತ್ತೆ ನನಗೆ ನಿರಂತರವಾಗಿ ಧೈರ್ಯ ತುಂಬುತ್ತಾ ಹೇಳುತ್ತಿದ್ದರು, "ಬಾಪು ನಮ್ಮ ಜೊತೆ ಇದ್ದಾರೆ, ಹಾಗಾಗಿ ಸ್ವಲ್ಪವೂ ಹೆದರಬೇಡ ." ಅದರಿಂದ ನಾನು ಧೈರ್ಯದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೆ. ನಾನು 999 ಸಂಖ್ಯೆಗೆ ಕರೆ ಮಾಡಿ ಆರನೇ ಮಾಲಿಗೆಯಿಂದ ಕೆಳಗೆ ಮ್ಯಾನೇಜ್‌ಮೆಂಟ್ ಆಫೀಸ್‌ಗೆ ಓಡಿ ಹೋದೆ. ಕೇವಲ 5 ನಿಮಿಷಗಳಲ್ಲಿ ನಮ್ಮಲ್ಲಿ ಪೊಲೀಸ್, ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಮತ್ತು ಆಂಬುಲೆನ್ಸ್ ಹಾಜರಿದ್ದರು. ವಿದೇಶದಲ್ಲಿ ನೆರೆಹೊರೆಯಲ್ಲಿ ಯಾರು ವಾಸಿಸುತ್ತಿದ್ದಾರೆಂಬುದು ಸಹ ತಿಳಿದಿರುವುದಿಲ್ಲ. ಆ ದಿನ ಆಶ್ಚರ್ಯಕರವಾಗಿ, ನಮ್ಮ ನೆರೆಹೊರೆಯವರೂ ಸಹ ನಮಗೆ ಸಹಾಯ ಮಾಡಿದರು. ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ನಮ್ಮೆಲ್ಲರ ಮುಖದಲ್ಲಿ ಒಂದು ವಿಶ್ವಾಸದ ಭಾವವಿತ್ತು ಮತ್ತು ನಮಗೆ ಏನೂ ಆಗಿರಲಿಲ್ಲ. ಇದನ್ನು ನೋಡಿದಾಗ ಎಲ್ಲರೂ ಆಶ್ಚರ್ಯಪಟ್ಟರು.

ನನ್ನ ಪತಿ ಮನೆ ಮಾಲೀಕರಿಗೆ ಫೋನ್ ಮಾಡಿ ಅಪಘಾತದ ಗಂಭೀರತೆಯನ್ನು ತಿಳಿಸಿದರು. ಹಾಂಗ್ ಕಾಂಗ್‌ನಲ್ಲಿ ನಿಯಮಗಳು ಅತ್ಯಂತ ಶಿಸ್ತಿನಿಂದ ಕೂಡಿರುತವೆ ಮತ್ತು ನಮ್ಮ ಮನೆ ಮಾಲೀಕರ ಸ್ವಭಾವವೂ ಅತ್ಯಂತ ಕಠಿಣವಾಗಿತ್ತು. ಇಷ್ಟಾದರೂ, ಯಾವುದೇ ರೀತಿಯಲ್ಲಿ ಹೇಗೆ ಹಾನಿಯಾಗಿದೆ ಎಂದು ನೋಡಲು ಅಥವಾ ಹಣ ತೆಗೆದುಕೊಳ್ಳಲು ಸಹ ಅವರು ಮನೆಗೆ ಬರಲಿಲ್ಲ. ಇದರ ಬದಲಿಗೆ ಅವರು ಹೇಳಿದರು, "ಏನೇ ಇರಲಿ, ಎಲ್ಲಾ ದುರಸ್ತಿ ಕೆಲಸಗಳನ್ನು ನೀವೇ ಮಾಡಿಸಿಕೊಳ್ಳಿ". ದೊಡ್ಡ ಪ್ರಮಾಣದ ಹಾನಿಯಾಗಿದ್ದರೂ ಯಾರಿಗೂ ಏನೂ ಆಗಿರಲಿಲ್ಲ. ಬಾಪು ನಮ್ಮೆಲ್ಲರ ಕಾಳಜಿ ವಹಿಸಿದ್ದರು. ದೊಡ್ಡ ಪ್ರಮಾಣದ ನಷ್ಟವಾಗಿದ್ದರೂ ನಾವು ಎಲ್ಲರೂ ಸುರಕ್ಷಿತರಾಗಿದ್ದೆವು. ಬಾಪು ಅವರ ಅಕಾರಣ ಕರುಣೆಗೆ ಯಾರು ಪಾತ್ರರಾಗುತ್ತಾರೋ, ಅವರ ಜೀವನದಲ್ಲಿ ಸುಖ, ಸಮಾಧಾನ ಮತ್ತು ಆನಂದದ ಚಿಲುಮೆ ಹೇರಳವಾಗಿ ಹರಿಯುತ್ತಲೇ ಇರುತ್ತದೆ.

ಈಗ ನನ್ನ ಎರಡನೇ ಅನುಭವವನ್ನು ಹೇಳುತ್ತೇನೆ. ಸ್ವಂತ ಆತ್ಮವಿಶ್ವಾಸ ಮತ್ತು ನಮ್ಮ ಸದ್ಗುರುಗಳ ಮೇಲೆ ಅಚಲ ವಿಶ್ವಾಸ ಈ ಎರಡೂ ವಿಷಯಗಳು ಜೀವನದಲ್ಲಿ ಅವಶ್ಯಕವಾಗಿವೆ. ಆತ್ಮವಿಶ್ವಾಸವಿದ್ದರೆ ನಮ್ಮ ಜೀವನದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಸದ್ಗುರುಗಳ ಮೇಲಿನ ವಿಶ್ವಾಸದಿಂದ ಭಕ್ತನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ನನ್ನ ಆತ್ಮವಿಶ್ವಾಸ ಆರಂಭದಲ್ಲಿ ಕಡಿಮೆಯಾಗಿದ್ದರಿಂದ ನನಗೆ ಪ್ರತಿ ಬಾರಿಯೂ ತುಂಬಾ ಭಯವಾಗುತ್ತಿತ್ತು. ಅದರಲ್ಲಿ ನೀರಿನ ಭಯವಂತೂ ಚಿಕ್ಕಂದಿನಿಂದಲೇ ಇತ್ತು. ನಾನು ನೀರಿನಲ್ಲಿ ಮುಳುಗುತ್ತಿದ್ದೇನೆ ಎಂಬಂತಹ ಅನೇಕ ಕನಸುಗಳು ನನಗೆ ಯಾವಾಗಲೂ ಬೀಳುತ್ತಿದ್ದವು.

ನಮ್ಮ ಹಾಂಗ್ ಕಾಂಗ್‌ನ ಉಪಾಸನಾ ಕೇಂದ್ರದ ಒಂದು ಕುಟುಂಬವು ಬಾಪು ಅವರ ಪಾದುಕೆಗಳ ಪೂಜೆಯನ್ನು ಬೋಟಿನಲ್ಲಿ ಆಯೋಜಿಸಿದ್ದರು. ಇದು ಆನಂದದ ಸಮಾರಂಭವಾಗಿತ್ತು, ಆದರೆ ನನಗೆ ಮಾತ್ರ ಭಯವಾಗುತ್ತಿತ್ತು. ಇದಕ್ಕೆ ಕಾರಣವೆಂದರೆ, ಮೊದಲು ಇದಕ್ಕಾಗಿ ಬೋಟಿನಲ್ಲಿ ಹೋಗಬೇಕಾಗಿತ್ತು. ಇಷ್ಟೇ ಅಲ್ಲದೆ, 100 ಅಡಿ ಎತ್ತರಕ್ಕೆ ನಾವು ನಡೆಯಬೇಕಾಗಿತ್ತು. ನನ್ನ ಪತಿ ಹಡಗಿನಲ್ಲಿಯೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಯಾವುದೇ ವ್ಯತ್ಯಾಸವಿರಲಿಲ್ಲ ಮತ್ತು ಮಗನು ಬೋಟಿನಲ್ಲಿ, ಅದೂ ಇಷ್ಟು ಎತ್ತರದಲ್ಲಿ ಹೋಗುವುದರಿಂದ ತುಂಬಾ ಉತ್ಸಾಹದಲ್ಲಿದ್ದನು. ಆದರೆ ನನ್ನಂತೂ ಭಯದಿಂದ ತತ್ತರಿಸಿ ಹೋಗಿದ್ದೆ. ನನ್ನ ಮನಸ್ಸಿನಲ್ಲಿ ಈ ವಿಚಾರವೂ ಬಂದು ಹೋಯಿತು, ಇವರಿಗೆ ಪೂಜೆಗಾಗಿ ಬೇರೆ ಜಾಗ ಸಿಗಲಿಲ್ಲವೇ? ನಾನು ಮನಸ್ಸಿನಲ್ಲೇ ಬಾಪುಗೆ ಹಾಗೆ ಹೇಳಿದೆ, 'ಬಾಪು, ಇಷ್ಟು ಎತ್ತರದಲ್ಲಿ, ಅದೂ ನೀರಿನಲ್ಲಿ ಹೋಗಿ ಪೂಜೆ ಏಕೆ ಮಾಡಬೇಕು ಇವರಿಗೆ?' ನನ್ನ ಮಗ ನನಗೆ ಧೈರ್ಯ ತುಂಬುತ್ತಾ, "ಅಮ್ಮಾ, ಸ್ವಲ್ಪವೂ ಹೆದರಬೇಡ. ನೀನು ನಮ್ಮಿಬ್ಬರ ಮಧ್ಯೆ ನಡೆಯು" ಎಂದು ಹೇಳುತ್ತಿದ್ದ. ಹಾಗೆಯೇ ಪತಿಯೂ, "ಮೇಲೆ ಹತ್ತುವಾಗ ಸ್ವಲ್ಪವೂ ಹಿಂದೆ ತಿರುಗಿ ನೋಡಬೇಡ" ಎಂದು ಹೇಳಿದರು. ನಾನು ಬಾಪು ಅವರ ಹೆಸರನ್ನು ಜಪಿಸುತ್ತಾ ಮೇಲೆ ಏರುತ್ತಿದ್ದೆ. ಇದರ ನಡುವೆ ತು೦ಬಾ ಜೊರಿ೦ದ ಮಳೆಯೂ ಸುರಿಯುತ್ತಿತ್ತು. ಈ ಎಲ್ಲಾ ಭಯಗಳಿಂದ ನಾನು ಆನಂದದಿಂದ ವಂಚಿತಳಾಗಿದ್ದೆ.

ನಾವು ಸುರಕ್ಷಿತವಾಗಿ 100 ಅಡಿಗಳಷ್ಟು ಎತ್ತರಕ್ಕೆ ತಲುಪಿದೆವು ಮತ್ತು ಅಲ್ಲಿ ಮೊದಲು ನನಗೆ 70 ವರ್ಷದ, ನಮ್ಮ ಶ್ರದ್ಧಾವಂತ ಸ್ನೇಹಿತೆಯ ತಾಯಿ ಭೇಟಿಯಾದರು. ಅವರೂ ನಮ್ಮಂತೆಯೇ ಮೇಲೆ ಏರಿ ಬಂದಿದ್ದರು ಮತ್ತು ಆನಂದದಿಂದ ನಮ್ಮ ಸ್ವಾಗತಕ್ಕೆ ನಿಂತಿದ್ದರು. ಅವರನ್ನು ನೋಡಿದ ತಕ್ಷಣ ನನಗೆ ನನ್ನ ಬಗ್ಗೆಯೇ ನಾಚಿಕೆ ಎನಿಸಿತು. ನಾನು ನೀರಿಗೆ ಹೆದರುತ್ತಿದ್ದೆ, ಆದರೆ ಬಾಪು ನನ್ನ ಜೊತೆ ಇದ್ದಾರೆ ಎಂಬ ದೃಢ ವಿಶ್ವಾಸ ನನ್ನಲ್ಲಿ ಇದ್ದಿದ್ದರೆ, ನನ್ನ ಆತ್ಮವಿಶ್ವಾಸ ಖಂಡಿತ ಹೆಚ್ಚುತ್ತಿತ್ತು. ಆದರೆ ನಾನು ನನ್ನದೇ ಭಯದಲ್ಲಿ ಸಿಕ್ಕಿಬಿದ್ದಿದ್ದೆ. ಬಾಪು ಅವರ ಕೃಪೆಯಿಂದ ಈ ತಪ್ಪು ನನ್ನ ಗಮನಕ್ಕೆ ಬಂತು. ಈ ಎಪ್ಪತ್ತರ ಆಜ್ಜಿ ಅಷ್ಟು ಎತ್ತರಕ್ಕೆ ಬರಲು ಸಾಧ್ಯವಾದರೆ, ನನಗೆ ಎತ್ತರ ಮತ್ತು ನೀರಿಗೆ ಹೆದರಲು ಕಾರಣವೇನು? ಈ ಆಲೋಚನೆ ಬಂದ ತಕ್ಷಣ ನಾನು ಪಾದುಕಾ ಪೂಜೆಯ ಸಂಭ್ರಮದಲ್ಲಿ ಆನಂದದಿಂದ ಭಾಗವಹಿಸಿದೆ, ಏಕೆಂದರೆ ಮನಸ್ಸಿನ ಭಯವು ಬಾಪು ಅವರ ಮೇಲಿನ ವಿಶ್ವಾಸವಾಗಿ ಪರಿವರ್ತಿತವಾಗಿತ್ತು.

ಆ ದಿನದಿಂದ ನನ್ನ ನೀರಿನ ಭಯ ಹೋಯಿತು ಮತ್ತು ಕನಸುಗಳು ಸಹ ನಿಂತುಹೋದವು. ಆತ್ಮವಿಶ್ವಾಸ ಹೆಚ್ಚಿದ ಕಾರಣ ಈಗ ನನ್ನಲ್ಲಿ ತುಂಬಾ ಉತ್ತಮ ಬದಲಾವಣೆ ಆಗಿದೆ. ಭಯ ಮತ್ತು ಕೀಳರಿಮೆಯಿಂದ ನಾನು ನನ್ನ ಅನೇಕ ಸಕಾರಾತ್ಮಕ ವಿಷಯಗಳನ್ನು ಕಳೆದುಕೊಂಡಿದ್ದೆ. ನನ್ನ ಬರಹ ಮತ್ತು ಅಂತಹ ಅನೇಕ ಹವ್ಯಾಸಗಳನ್ನು ನಾನು ಈಗ ಪ್ರಾರಂಭಿಸಲು ಸಾಧ್ಯವಾಯಿತು. ಬಾಪು ಭಕ್ತಿಯಿಂದ ಅನೇಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಬಾಪು ಅವರಲ್ಲಿ ಒಂದೇ ಒಂದು ಬೇಡಿಕೆ ಇದೆ. 'ಬಾಪು, ನಿಮ್ಮ ಮೇಲಿನ ನನ್ನ ವಿಶ್ವಾಸವು ಹೀಗೆಯೇ ಸದಾ ಹೆಚ್ಚುತ್ತಿರಲಿ ಎಂದು ನಿಮ್ಮ ಚರಣಗಳಿಗೆ ಪ್ರಾರ್ಥಿಸುತ್ತೇನೆ.'

ಹರಿ ಓಂ ಶ್ರೀರಾಮ್ ಅಂಬಜ್ಞ

ನಾಥಸಂವಿಧ

ગુજરાતી >> বাংলা >>

Tuesday, 22 July 2025

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ 15, 2007)

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)
ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)

ನಮ್ಮ ಮನೆಯ ವಾತಾವರಣ ಚಿಕ್ಕಂದಿನಿಂದಲೂ ಸಂಪೂರ್ಣವಾಗಿ ಶುದ್ಧ ವೈದಿಕ ಸಂಸ್ಕಾರಗಳಿಂದ ಕೂಡಿತ್ತು. ಆದರೆ, ತಾರ-ತಮ್ಯ, ಜಾತಿ-ಭೇದ, ಕರ್ಮಠ ಕರ್ಮಕಾಂಡ ಇವುಗಳ ಸುಳಿವೇ ಇರಲಿಲ್ಲ. ಅಮ್ಮ ಮತ್ತು ಅಜ್ಜಿ ಅವರಿಗೆ ಸಂಸ್ಕೃತ ಸಾಹಿತ್ಯದಲ್ಲಿ ಉತ್ತಮ ಜ್ಞಾನವಿತ್ತು, ಎಲ್ಲಾ ಸಂಹಿತೆಗಳು ಅವರಿಗೆ ಕಂಠಪಾಠವಾಗಿದ್ದವು. ಹೀಗಾಗಿ, ವೇದ ಮಂತ್ರಗಳ ಶುದ್ಧ ಮತ್ತು ಲಯಬದ್ಧ ಉಚ್ಚಾರಣೆಗಳು ಸದಾ ನಮ್ಮ ಕಿವಿಗೆ ಬೀಳುತ್ತಿದ್ದವು. ಇಂದಿಗೂ ಅವರ ಧ್ವನಿಯಲ್ಲಿನ ವೈದಿಕ ಮಂತ್ರಗಳು ಮತ್ತು ಸೂಕ್ತಗಳ ಮಧುರ ಸ್ವರಗಳು ನನ್ನ ಹೃದಯದಲ್ಲಿ ಪ್ರತಿಧ್ವನಿಸುತ್ತವೆ. ಗಣಪತಿ ಆರತಿಯ ನಂತರ ಹೇಳಲಾಗುವ ಮಂತ್ರಪುಷ್ಪಾಂಜಲಿ, ಇಂದಿನ ‘ಶಾರ್ಟ್‌ಕಟ್’ ರೀತಿ ‘ಓಂ ಯಜ್ಞೇನ ಯಜ್ಞಮಯಜಂತಾ…’ ದಿಂದ ಪ್ರಾರಂಭವಾಗದೆ, ‘ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ…’ ದಿಂದ ಪ್ರಾರಂಭವಾಗಿ ಸುಮಾರು ಅರ್ಧದಿಂದ ಮುಕ್ಕಾಲು ಗಂಟೆಗಳ ಕಾಲ ನಡೆಯುತ್ತಿತ್ತು. ಅದರಲ್ಲಿನ ಆರೋಹ, ಅವರೋಹ, ಆಘಾತ, ಉದ್ದಾರ ಇತ್ಯಾದಿ ಎಲ್ಲಾ ನಿಯಮಗಳನ್ನು ಪಾಲಿಸಿದರೂ, ಆ ಮಂತ್ರಪುಷ್ಪಾಂಜಲಿಯಲ್ಲಿನ ಮಾಧುರ್ಯ, ಕೋಮಲತೆ ಮತ್ತು ಸಹಜತೆ ಹಾಗೆಯೇ ಜೀವಂತವಾಗಿರುತ್ತಿತ್ತು. ಏಕೆಂದರೆ, ಆ ಮಂತ್ರೋಚ್ಚಾರಣೆಯಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಂಬಲವಿರಲಿಲ್ಲ, ಬದಲಾಗಿ ಸಂಪೂರ್ಣ ಭಕ್ತಿ ರಸದಿಂದ ತುಂಬಿದ ಪ್ರಫುಲ್ಲಿತ ಅಂತಃಕರಣವಿರುತ್ತಿತ್ತು.

ನಂತರ, ನನ್ನ ಐದನೇ ವಯಸ್ಸಿನಲ್ಲಿ, ನನ್ನ ಅಜ್ಜಿಯ ಮನೆಯಲ್ಲಿ ಅಂದರೆ ಪಂಡಿತರ ಮನೆಯ ಗಣಪತಿ ಮುಂದೆ, ಅವರಿಬ್ಬರೂ ನನಗೆ ಮಂತ್ರಪುಷ್ಪಾಂಜಲಿಯ ಶಾಸ್ತ್ರೀಯ ವಿಧಾನವನ್ನು ಮೊದಲ ಬಾರಿಗೆ ಕಲಿಸಿದರು. ಆಗ ನನ್ನ ಅಮ್ಮನ ಮೂವರು ಚಿಕ್ಕಮ್ಮಂದಿರು, ಅಜ್ಜಿ ಮತ್ತು ಅಮ್ಮ ಹೀಗೆ ಐವರು ಸೇರಿ ನನಗೆ ಆರತಿ ಮಾಡಿ, ಸಾಕಷ್ಟು ಮೋದಕಗಳನ್ನು ತಿನ್ನಿಸಿದರು. ಆ ಸಮಯದವರೆಗೆ ನಾನು ನನ್ನ ಅಜ್ಜಿಯ ಮನೆಯಲ್ಲಿ ಏಕೈಕ ಮೊಮ್ಮಗನಾಗಿದ್ದೆ, ಹಾಗಾಗಿ ಸಂಪೂರ್ಣ ಪಾಧ್ಯೆ ಮತ್ತು ಪಂಡಿತ್ ಮನೆತನಗಳಿಗೂ ನಾನು ಅತ್ಯಂತ ಪ್ರೀತಿಯವನಾಗಿದ್ದೆ. ಅದೇ ದಿನ ಅಜ್ಜಿ, ಪಾಧ್ಯೆ ಮನೆತನದ ಸಂಪ್ರದಾಯದ ಪ್ರಕಾರ ಬಾಲಗಣೇಶನನ್ನು ಪ್ರತಿಷ್ಠಾಪಿಸುವ ವಿಧಾನವನ್ನು ನನಗೆ ವಿವರಿಸಿದರು. ಅದಕ್ಕಾಗಿಯೇ ಇಂದಿಗೂ ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸುವ ಮೂರ್ತಿ ಬಾಲಗಣೇಶನದೇ ಆಗಿರುತ್ತದೆ.

ಒಂದು ಬಾರಿ ನಾನು ಅಜ್ಜಿಯನ್ನು ಕೇಳಿದೆ, ‘ಪ್ರತಿ ವರ್ಷ ಬಾಲಗಣೇಶನನ್ನೇ ಯಾಕೆ ಅಜ್ಜಿ?’ ಅಜ್ಜಿ ನನ್ನ ಕೆನ್ನೆಯನ್ನು ಸವರಿಕೊಂಡು ಉತ್ತರಿಸಿದರು, “ಅರೇ ಬಾಪುರಾಯ, ಒಂದು ಮಗು ಮನೆಗೆ ಬಂದಾಗ ನಾವು ಅದನ್ನು ಪ್ರೀತಿಯಿಂದ ನೋಡಿಕೊಂಡರೆ, ಆ ಮಗುವಿನ ಹಿಂದೆಯೇ ಅದರ ತಂದೆ-ತಾಯಿ ಕೂಡ ಬಂದು ಸಂತೋಷಪಡುತ್ತಾರೆ. ಈ ಬಾಲಗಣೇಶನನ್ನು ಭಕ್ತರು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಪಾರ್ವತಿ ಮಾತೆ ಮತ್ತು ಪರಮಶಿವನ ಸ್ವಾಗತ ಮತ್ತು ಪೂಜೆ ಸಹ ತನ್ನಿಂದ ತಾನೇ ಆಗುತ್ತದೆ. ಮತ್ತೊಂದು ವಿಷಯ, ಅಪರಿಚಿತ ಸಾಮಾನ್ಯ ಮನುಷ್ಯ ಕೂಡ ಮುದ್ದಾದ ಚಿಕ್ಕ ಮಗುವಿನೊಂದಿಗೆ ವ್ಯವಹರಿಸುವಾಗ ಅವರ ಮನಸ್ಸಿನಲ್ಲಿ ತಾನಾಗಿಯೇ ಒಂದು ನಿಷ್ಕಾಮ ಪ್ರೇಮ ಪ್ರಕಟವಾಗುತ್ತದೆ. ಹಾಗಾದರೆ, ಈ ಅತ್ಯಂತ ಸುಂದರವಾದ ಮಂಗಳಮೂರ್ತಿಯ ಬಾಲರೂಪದ ಸಹವಾಸದಲ್ಲಿ ಭಕ್ತರ ಮನಸ್ಸಿನಲ್ಲಿ ಭಕ್ತಿ, ಪ್ರೇಮ ಹಾಗೂ ನಿಷ್ಕಾಮ ಮತ್ತು ಪವಿತ್ರ ಪ್ರೇಮ ಇರುವುದಲ್ಲವೆ?”


 

ಅಜ್ಜಿಯ ಈ ಭಾವನೆಗಳು ಅತ್ಯಂತ ಶುದ್ಧ ಮತ್ತು ಪವಿತ್ರ ಭಕ್ತಿಯಿಂದ ತುಂಬಿದ ಅಂತಃಕರಣದ ಸಹಜ ಪ್ರವೃತ್ತಿಗಳಾಗಿದ್ದವು. ನಾವೆಲ್ಲರೂ ಅಕ್ಷರಶಃ ಕೋಟ್ಯಂತರ ಜನರು ಗಣಪತಿಯನ್ನು ಮನೆಗೆ ತರುತ್ತೇವೆ, ಕೆಲವರು ಒಂದೂವರೆ ದಿನ, ಇನ್ನು ಕೆಲವರು ಹತ್ತು ದಿನ. ವಿವಿಧ ರೀತಿಯ ಗಣೇಶ ಮೂರ್ತಿಗಳು ಇರಲಿ, ಆದರೆ ಈ ವಿಘ್ನಹರ್ತ ಗಣೇಶನೊಂದಿಗೆ ನಾವು ಇಂತಹ ಆತ್ಮೀಯ ಮತ್ತು ಆಪ್ತವಾದ ಮನೆತನದ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆಯೇ?

ಮನೆಗೆ ಬಂದ ಗಣಪತಿ ಕೇವಲ ಮನೆಯ ಸಂಪ್ರದಾಯವನ್ನು ಮುರಿಯಬಾರದು, ಮುರಿದರೆ ವಿಘ್ನಗಳು ಬರುತ್ತವೆ ಎಂಬ ಭಾವನೆಯಿಂದ ಕೆಲವು ಕಡೆಗಳಲ್ಲಿ ತರಲಾಗುತ್ತದೆ. ಕೆಲವು ಕಡೆಗಳಲ್ಲಿ ಹರಕೆ ತೀರಿಸಲು ತರಲಾಗುತ್ತದೆ, ಇನ್ನು ಕೆಲವು ಕಡೆಗಳಲ್ಲಿ ಕೇವಲ ಉತ್ಸವ ಮತ್ತು ಮೋಜು ಮಸ್ತಿಗಾಗಿ ತರಲಾಗುತ್ತದೆ. ಇಂತಹ ಗಣಪತಿ ಪ್ರತಿಷ್ಠಾಪನೆಯಲ್ಲಿ ಮಂತ್ರಗಳು, ಮಂತ್ರಪುಷ್ಪಾಂಜಲಿ, ಆರತಿ, ಮಹಾನೈವೇದ್ಯ ಇರುತ್ತವೆ. ಜೊತೆಗೆ ರೀತಿ-ರಿವಾಜುಗಳು ಮತ್ತು ಶಾಸ್ತ್ರಗಳನ್ನು ಸಂಪೂರ್ಣವಾಗಿ ಪಾಲಿಸುವ ಭೀತಿಯಿಂದ ಕೂಡಿದ ಪ್ರಯತ್ನವೂ ಇರುತ್ತದೆ. ಆದರೆ, ಈ ಎಲ್ಲ ಗೊಂದಲದಲ್ಲಿ ಕಳೆದುಹೋಗುವುದು ಈ ಆರಾಧನೆಯ ಮೂಲ ಸಾರ ಅಂದರೆ ಪ್ರೀತಿಭರಿತ ಭಕ್ತಿಭಾವ.

ಮಂಗಲಮೂರ್ತಿ ಮೋರ್ಯಾ ಮತ್ತು ಸುಖಕರ್ತಾ ದುಃಖಹರ್ತಾ, ಈ ಶ್ರೀ ಗಣಪತಿಯ ಬಿರುದುಗಳು ಎಲ್ಲರಿಗೂ ತಿಳಿದಿವೆ. ವಾಸ್ತವವಾಗಿ, ಈ ‘ಸುಖಕರ್ತಾ ದುಃಖಹರ್ತಾ’ ಎಂಬ ಬಿರುದಿನಿಂದಲೇ ನಾವು ಗಣಪತಿಯನ್ನು ಮನೆಗೆ ತರಲು ಸಿದ್ಧರಾಗುತ್ತೇವೆ. ಆದರೆ ‘ಮಂಗಲಮೂರ್ತಿ’ ಎಂಬ ಬಿರುದಿನ ಬಗ್ಗೆ ಏನು? ಆ ಸಿದ್ಧಿ ವಿನಾಯಕ ಎಲ್ಲವನ್ನೂ ಮಂಗಳಕರವನ್ನಾಗಿ ಮಾಡುತ್ತಾನೆ. ಆದರೆ, ಅವನನ್ನು ಮನೆಗೆ ತಂದ ನಂತರ ನಾವು ಅವನನ್ನು ಎಷ್ಟು ಮಂಗಳಕರ ವಾತಾವರಣದಲ್ಲಿ ಇಡುತ್ತೇವೆ? ಇದೇ ಮುಖ್ಯ ಪ್ರಶ್ನೆ.

ಕೇವಲ ದೂರ್ವೆಗಳ ದೊಡ್ಡ ಹಾರವನ್ನು ಹಾಕಿ, ಇಪ್ಪತ್ತೊಂದು ಮೋದಕಗಳನ್ನು ಬೆಳಿಗ್ಗೆ ಮತ್ತು ಸಂಜೆ ಅವನ ಮುಂದೆ ಇಟ್ಟು, ಕೆಂಪು ಹೂವುಗಳನ್ನು ಅರ್ಪಿಸಿ ಮತ್ತು ಆರತಿಗಳಿಗೆ ತಾಳಗಳನ್ನು ಕುಟ್ಟಿ, ನಾವು ನಮ್ಮ ಕೈಲಾದಷ್ಟು ಮತ್ತು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಂಗಳವನ್ನು ಸೃಷ್ಟಿಸುತ್ತೇವೆಯೇ? ಉತ್ತರ ಬಹುತೇಕ ಬಾರಿ ‘ಇಲ್ಲ’ ಎಂದೇ ಸಿಗುತ್ತದೆ.

ಹಾಗಾದರೆ, ಆ ಮಂಗಳಮೂರ್ತಿಗೆ ನಮ್ಮಿಂದ ನಿರೀಕ್ಷಿತವಾಗಿರುವ ‘ಮಾಂಗಲ್ಯ’ವನ್ನು ನಾವು ಹೇಗೆ ಅರ್ಪಿಸಬಹುದು? ಉತ್ತರ ತುಂಬಾ ಸರಳ ಮತ್ತು ಸುಲಭ. ಆ ಮೂರ್ತಿಯನ್ನು ಸ್ವಾಗತಿಸುವಾಗ, ಒಂದು ವರ್ಷದ ನಂತರ ನಮ್ಮ ಆಪ್ತರು ಮನೆಗೆ ಮರಳುತ್ತಿದ್ದಾರೆ ಎಂಬ ಭಾವನೆಯನ್ನು ಇಟ್ಟುಕೊಳ್ಳಿ; ಇಪ್ಪತ್ತೊಂದು ಮೋದಕಗಳೊಂದಿಗೆ ನೈವೇದ್ಯದಿಂದ ತುಂಬಿದ ತಟ್ಟೆಯನ್ನು ಅವನ ಮುಂದೆ ಇಟ್ಟು, ಪ್ರೀತಿಯಿಂದ ಆಗ್ರಹಪಡಿಸಿ; ಬಂದ ಅತಿಥಿಗಳ ಆತಿಥ್ಯಕ್ಕಿಂತ ಆ ಗಣೇಶನ ಆರಾಧನೆಯ ಕಡೆಗೆ ಹೆಚ್ಚು ಗಮನ ಕೊಡಿ; ಆರತಿ ಹೇಳುವಾಗ ಯಾರೊಂದಿಗೂ ಸ್ಪರ್ಧೆ ಮಾಡಬೇಡಿ ಮತ್ತು ಮುಖ್ಯವಾಗಿ, ಈ ಮಹಾವಿನಾಯಕ ತನ್ನ ಸ್ಥಾನಕ್ಕೆ ಮರಳಲು ಹೊರಟಾಗ, ಹೃದಯ ತುಂಬಿ ಬರಲಿ ಮತ್ತು ಪ್ರೀತಿಯ ವಿಶ್ವಾಸಪೂರ್ವಕ ವಿನಂತಿಯಾಗಲಿ, ‘ಮಂಗಲಮೂರ್ತಿ ಮೋರ್ಯಾ, ಮುಂದಿನ ವರ್ಷ ಬೇಗ ಬನ್ನಿ.’

ಸಂಪಾದಕೀಯದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ನನ್ನ ಶ್ರದ್ಧಾಳು ಸ್ನೇಹಿತರೇ, ‘ಮುಂದಿನ ವರ್ಷ ಬೇಗ ಬನ್ನಿ’ ಈ ವಾಕ್ಯದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಬರುವ ದಿನಾಂಕ ಈಗಾಗಲೇ ನಿಗದಿಯಾಗಿರುತ್ತದೆ, ಹಾಗಾದರೆ ಕೇವಲ ಬಾಯಿಂದ ‘ಬೇಗ ಬನ್ನಿ’ ಎಂದು ಹೇಳುವುದರ ಹಿಂದೆ ಯಾವ ಅರ್ಥವಿರಬಹುದು? ಇದರಲ್ಲಿ ಒಂದೇ ಅರ್ಥವಿದೆ, ಅದು ಮುಂದಿನ ವರ್ಷದವರೆಗೆ ಕಾಯಬೇಡಿ, ದೇವ ಮೋರ್ಯಾ, ನೀವು ಪ್ರತಿದಿನವೂ ಬರುತ್ತಿರಿ ಮತ್ತು ಅದು ಆದಷ್ಟು ಬೇಗ ನಡೆಯಲಿ.’


मराठी >> हिंदी >> বাংলা>> ગુજરાતી>>

Friday, 18 July 2025

ಅನಿರುದ್ಧ ಬಾಪೂ ಅವರು ವಿವರಿಸಿದ ಶ್ರೀ ಗಣೇಶನ ಭಕ್ತಿ, ನಂಬಿಕೆ ಮತ್ತು ವಿಜ್ಞಾನದ ಪಯಣ


ನಾವು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗ, ಅದು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ ಎಂದು ವಿಘ್ನಹರ್ತ ಶ್ರೀ ಗಣೇಶನನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಚಿಕ್ಕವರಿದ್ದಾಗ ಅಕ್ಷರಗಳನ್ನು ಬರೆಯಲು ಕಲಿಯುವಾಗಲೂ, ನಾವು ಮೊದಲು 'ಶ್ರೀ ಗಣೇಶಾಯ ನಮಃ' ಎಂದೇ ಬರೆಯಲು ಕಲಿಯುತ್ತೇವೆ. ಎಷ್ಟು ವಿವಿಧ ದೇವರ ದೇವಸ್ಥಾನಗಳಿದ್ದರೂ, ಶ್ರೀ ಗಣೇಶ ಮಾತ್ರ ಪ್ರತಿಯೊಂದು ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರದಲ್ಲಿ ವಿರಾಜಮಾನನಾಗಿರುತ್ತಾನೆ. 'ಮಂಗಲಮೂರ್ತಿ ಶ್ರೀ ಗಣಪತಿ' ನಿಜಕ್ಕೂ ಎಲ್ಲ ಶುಭ ಕಾರ್ಯಗಳ ಅಗ್ರಸ್ಥಾನದಲ್ಲಿರುವ, ನಮ್ಮ ಭಾರತದಾದ್ಯಂತ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪ್ರಿಯವಾದ ದೈವವಾಗಿದೆ.

ಇದೇ ಗಣಪತಿಯ ಬಗ್ಗೆ, ದೈನಿಕ 'ಪ್ರತ್ಯಕ್ಷ'ದ ಕಾರ್ಯಕಾರಿ ಸಂಪಾದಕ ಡಾ. ಶ್ರೀ ಅನಿರುದ್ಧ ಧೈರ್ಯಧರ ಜೋಶಿ (ಸದ್ಗುರು ಶ್ರೀ ಅನಿರುದ್ಧ ಬಾಪೂ) ಅವರು ತಮ್ಮ ಅಧ್ಯಯನ ಮತ್ತು ಚಿಂತನೆಯಿಂದ ಮೂಡಿಬಂದ ವಿಚಾರಗಳನ್ನು ಅನೇಕ ಸಂಪಾದಕೀಯಗಳಲ್ಲಿ ಮಂಡಿಸಿದ್ದಾರೆ. ಈ ಸಂಪಾದಕೀಯಗಳು ಕೇವಲ ಮಾಹಿತಿ ನೀಡಲು ಸೀಮಿತವಾಗಿಲ್ಲ, ಬದಲಿಗೆ ಭಕ್ತರ ಮನಸ್ಸಿನ ಪ್ರಶ್ನೆಗಳಿಗೆ ಉತ್ತರಿಸುವ, ಭಕ್ತಿಯನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಮತ್ತು ಗಣಪತಿಯ ವಿವಿಧ ರೂಪಗಳನ್ನು ಆಳವಾಗಿ ಪರಿಚಯಿಸುವಂತಿವೆ.

ಈ ಸಂಪಾದಕೀಯಗಳಲ್ಲಿ ಬಾಪೂ ಅವರು ವೇದ, ಪುರಾಣ, ಸಂತ ಸಾಹಿತ್ಯದಿಂದ ಗಣಪತಿಯ ಸ್ವರೂಪ ಮತ್ತು ಅದರ ಹಿಂದಿನ ತತ್ತ್ವಜ್ಞಾನವನ್ನು ಬಹಳ ಸುಲಭ ಮತ್ತು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ. ಬ್ರಹ್ಮಣಸ್ಪತಿ-ಗಣಪತಿ ಸಂಕಲ್ಪನೆ, ವಿಶ್ವದ ಘನಪ್ರಾಣ ಗಣಪತಿ, ಗಣಪತಿಯ ಜನ್ಮ ಕಥೆಯ ಹಿಂದಿನ ಸಿದ್ಧಾಂತ, ಸಾರ್ವಜನಿಕ ಗಣೇಶೋತ್ಸವದ ಹಿಂದಿನ ಪಾತ್ರ, ಮೂಲಾಧಾರ ಚಕ್ರದ ಅಧಿಷ್ಠಾತ ಗಣಪತಿ, ಗಣಪತಿಯ ಪ್ರಮುಖ ಹೆಸರುಗಳು, ಅವನ ವಾಹನ ಮೂಷಕರಾಜ, ವ್ರತಬಂಧ ಕಥೆ, ಮೋದಕ ಕಥೆ ಮತ್ತು ಆ ಕಥೆಗಳ ಭಾವಾರ್ಥ... ಈ ಎಲ್ಲ ವಿಷಯಗಳನ್ನು ಬಾಪೂ ಅವರು ಇಂತಹ ರಚನೆಯಲ್ಲಿ ಮಂಡಿಸಿದ್ದಾರೆ, ಅಂದರೆ ನಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವಂತೆ.

ಗಣಪತಿ ದೈವದ ಬಗ್ಗೆ ಈ ವಿವೇಚನೆಯು ಶ್ರದ್ಧಾವಂತ ಭಕ್ತರಿಗೆ ಕೇವಲ ಮಾಹಿತಿಯಲ್ಲ, ಬದಲಿಗೆ ಭಾವನಾತ್ಮಕ ದೃಷ್ಟಿಕೋನದಿಂದ ನಮ್ಮ ಶ್ರದ್ಧೆಯನ್ನು ಇನ್ನಷ್ಟು ದೃಢಪಡಿಸುವಂತಹದ್ದು.

ದೈನಿಕ 'ಪ್ರತ್ಯಕ್ಷ'ದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರಕಟವಾದ ಈ ಸಂಪಾದಕೀಯಗಳು ಈಗ ಬ್ಲಾಗ್‌ಪೋಸ್ಟ್ ರೂಪದಲ್ಲಿ ನಮ್ಮೆಲ್ಲರಿಗೂ ಲಭ್ಯವಾಗುತ್ತಿವೆ — ಬಾಪೂ ಅವರು ನೀಡಿದ ಆ ಅಮೂಲ್ಯ ವಿಚಾರಗಳ ಪರಿಮಳ ನಮ್ಮೆಲ್ಲರ ಮನಸ್ಸಿನಲ್ಲಿ ಹರಡಲಿ ಎಂಬ ಒಂದೇ ಉದ್ದೇಶದಿಂದ.

_____________________________________________

Tuesday, 15 July 2025

ಘೋರಕಷ್ಟೋಧ್ಧರಣ ಸ್ತೋತ್ರ ಪಠಣ

 
ಶ್ರಾವಣ ತಿಂಗಳು ಶ್ರವಣಭಕ್ತಿಯ ತಿಂಗಳು ಆಗಿದ್ದು, ಈ ತಿಂಗಳಿನಲ್ಲಿ ಹೆಚ್ಚು ಶ್ರವಣ, ಪಠಣ ಮತ್ತು ಪೂಜೆಯನ್ನು ಮಾಡುವ ಬಗ್ಗೆ ಸದ್ಗುರು ಶ್ರೀ ಅನಿರುದ್ಧ ಬಾಪುರವರು ಶೃದ್ಧಾವಾನರಿಗೆ ಹೇಳಿದ್ದೇ ಇದೆ. ಬಾಪುರವರು ತಮ್ಮ ಪ್ರವಚನದ ಮೂಲಕ ಮತ್ತು ಅಗ್ರಲೇಖನಗಳಲ್ಲಿ ಹಲವಾರು ಬಾರಿ ನಾಮಸ್ಮರಣೆ, ಮಂತ್ರ-ಸ್ತೋತ್ರ ಪಠಣ, ಆಧ್ಯಾತ್ಮಿಕ ಗ್ರಂಥಗಳ ಪಠಣ ಮತ್ತು ಸಾಮೂಹಿಕ ಉಪಾಸನೆಯ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ಬಾಪು ಅವರು 28 ಜುಲೈ 2011 ರಂದು ನೀಡಿದ ತಮ್ಮ ಮರಾಠಿ ಪ್ರವಚನದಲ್ಲಿ 'ಶ್ರಾವಣ ಮಾಸದಲ್ಲಿಯ ಘೋರಕಷ್ಟೋಧ್ಧರಣ ಸ್ತೋತ್ರ ಪಠಣದ ಮಹತ್ವ' ದ ಕುರಿತು ಹೇಳಿದರು. ಬಾಪು ಅವರ ಹೇಳಿಕೆಯ ಸಾರಾಂಶ ಹೀಗಿದೆ -
 
"ಸದ್ಗುರುತತ್ವದಷ್ಟು ಪ್ರೀತಿ ಯಾರೂ ಮಾಡುವುದಿಲ್ಲ ಮತ್ತು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಸೀಮಿತತೆ ಎಷ್ಟೇ ಹೆಚ್ಚಿದರೂ, ಅದು ಸೀಮಿತವೇ ಇರುತ್ತದೆ. ಆದರೆ ಕೇವಲ ಪರಮಾತ್ಮ ಮಾತ್ರ  ಅಪರಿಮಿತ.. ಈ ಸದ್ಗುರುತತ್ತ್ವವು ಎಲ್ಲಿಯೂ ಮುರಿದಿಲ್ಲ. ಇದು ನಿರ್ಗುಣವಾಗಿದೆ, ನಿರಾಕಾರವಾಗಿದೆ, ಆದರೆ ಅದರ ಜೊತೆ ಅದು ಪೂರ್ಣ ಚೈತನ್ಯದಿಂದ ಕೂಡಿದೆ. ಘೋರಕಷ್ಟೋಧ್ಧರಣ ಸ್ತೋತ್ರವು ಶ್ರೀಗುರು ದತ್ತಾತ್ರೇಯರ ಸ್ತೋತ್ರವಾಗಿದ್ದು, ಇದನ್ನು ರಚಿಸಿದವರು ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು. ಈ ಸ್ತೋತ್ರವು ಐದು ಶ್ಲೋಕಗಳನ್ನೊಳಗೊಂಡಿದ್ದು, ಸುಲಭವಾಗಿ  108 ಬಾರಿ ಪಠಿಸಬಹುದು ಹಾಗೆ ಇದೆ. ಅಂತಹ ಪ್ರಭಾವಶಾಲಿ ಸ್ತೋತ್ರವನ್ನು ನಾವು ಶ್ರಾವಣ ಮಾಸದಲ್ಲಿ ಪಠಿಸುತ್ತೇವೆ."
 
ಇದರಿಂದ ಈ ಸ್ತೋತ್ರವನ್ನು ಪ್ರತಿದಿನ ಪಠಿಸಬೇಕೆಂದು ನಮ್ಮ ಗಮನಕ್ಕೆ ಬರುವದು,  ಆದರೆ  ಪವಿತ್ರ ಶ್ರಾವಣ ಮಾಸದಲ್ಲಿ ಇದನ್ನು ಸಾಮೂಹಿಕವಾಗಿ 108 ಬಾರಿ ಪಠಿಸಬೇಕೆಂದು ಬಾಪು ಒತ್ತಿ ಹೇಳಿದ್ದಾರೆ, ಇದು ಪ್ರತಿಯೊಬ್ಬ ಭಕ್ತನಿಗೂ ಅಪಾರ ಫಲ ನೀಡುತ್ತದೆ.
 
ಸದ್ಗುರುಗಳ ಮಾರ್ಗದರ್ಶನದಂತೆ ಭಕ್ತರು ತಿಂಗಳು ಪೂರ್ತಿ ಸಾಮೂಹಿಕ ಸ್ತೋತ್ರ ಪಠಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸುತ್ತಾರೆ. ಬಾಪು ಅವರು ಸತ್ಯಪ್ರವೇಶದಲ್ಲಿ 'ಯಜ್ಞೇನ-ದಾನೇನ-ತಪಸಾ' ಬಗ್ಗೆ ಹೇಳಿದ್ದಾರೆ. ಅದರಂತೆ ಸ್ತೋತ್ರಪಠಣದ ಜೊತೆಗೆ ಭಕ್ತರು ತಮ್ಮ ಇಚ್ಛೆಯಿಂದ ಅನ್ನಪೂರ್ಣ ಪ್ರಸಾದಮ್ ಯೋಜನೆಗೆ ಧಾನ್ಯ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಈ ಬಾರಿ ಪಠಣ ಅವಧಿಯಲ್ಲಿ ಇಚ್ಛೆಯುಳ್ಳ ಭಕ್ತರು ಕೆಳಗಿನ ಲಿಂಕ್ ಮೂಲಕ ಅನ್ನಪೂರ್ಣ ಮಹಾಪ್ರಸಾದಮ್ ಯೋಜನೆಗೆ ದೇಣಿಗೆ ನೀಡಬಹುದು.
 
ಘೋರಕಷ್ಟೋಧ್ಧರಣ ಸ್ತೋತ್ರದ ಕುರಿತು ಒಂದು ಕಥೆಯಿದೆ -
ಶಕ 1833ರಲ್ಲಿ ಅಂದರೆ ಕ್ರಿ.ಶ. 1911ರಲ್ಲಿ ಮಹಾನ್ ಯತಿವರ್ಯ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರ ಇಪ್ಪತ್ತೊಂದನೇ ಚಾತುರ್ಮಾಸ ಕುರುಗಡ್ಡಿಯಲ್ಲಿ ಸಂಪನ್ನವಾಯಿತು. ಅಲ್ಲಿ ಸ್ವಾಮೀಜಿಯ ದರ್ಶನಕ್ಕೆ ಬಂದ ಭಕ್ತನೊಬ್ಬನು ಸಂತಾನಲಾಭ ಹಾಗೂ ಸಾಲ ಮುಕ್ತಿಗಾಗಿ ಪ್ರಾರ್ಥನೆ ಮಾಡಿದನು. ಸ್ವಾಮೀಜಿಯ ಅನುಗ್ರಹದಿಂದ ಕೂಡಲೇ ಆ ಭಕ್ತನಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಹೀಗೆ ಇಬ್ಬರು ಮಕ್ಕಳು ಜನಿಸಿದರು ಮತ್ತು ಅವನ ಮೇಲಿರುವ ಸಾಲವೂ ತೀರಿತು.
 
"ಭಕ್ತರ ಇಚ್ಛೆಗಳು ಈಡೇರಲಿ, ಮತ್ತು ಕಲಿಯುಗದಲ್ಲಿ ಭಕ್ತರು ಎದುರಿಸುತ್ತಿರುವ ಕಷ್ಟಗಳು ದೂರವಾಗಲಿ, ಅವರು ಶಾಶ್ವತ ಶುಭವನ್ನು ಪಡೆಯಲಿ, ನಮ್ಮ  ಕಷ್ಟಗಳು ಹೇಗೆ ದೂರವಾಯಿತು, ನಾವು ಹೇಗೆ ಸುಖಿಯಾದೆವು ಮತ್ತು ಜೊತೆಗೆ ಹೆಚ್ಚು ಭಕ್ತಿಯುಳ್ಳವರಾದೆವು; ಅದೇ ರೀತಿ ಭಕ್ತರ ಕಷ್ಟಗಳು ನಿವಾರಣೆಯಾಗಲು ಒಂದು ಸ್ತೋತ್ರವನ್ನು ಬರೆದುಕೊಟ್ಟರೆ ಎಲ್ಲ ಭಕ್ತರಿಗೂ ಅದರ  ಪ್ರಯೊಜನವಾಗುವದು" ಎಂದು ಆ ಭಕ್ತನು ಸ್ವಾಮೀಜಿಯವರಿಗೆ ವಿನಂತಿಸಿದನು. ಕರುಣಾಮಯ ಹೃದಯದ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು ಆ ವಿನಂತಿಯನ್ನು ಒಪ್ಪಿಕೊಂಡು ಈ ಘೋರಕಷ್ಟೋಧ್ಧರಣ ಸ್ತೋತ್ರವನ್ನು ರಚಿಸಿದರು.
 
ಧನ್ಯನಾದನು ಆ ಭಕ್ತನು ಮತ್ತು ಧನ್ಯರಾದರು ಶ್ರೀಮಹಾರಾಜರು. ಪವಿತ್ರ ದತ್ತಕ್ಷೇತ್ರ ನೃಸಿಂಹವಾಡಿಯಲ್ಲಿ ಈ ಸ್ತೋತ್ರವನ್ನು ನಿತ್ಯ ಪಠಿಸಲಾಗುತ್ತದೆ.
 
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ಘೋರಕಷ್ಟೋಧ್ಧರಣ ಸ್ತೋತ್ರದ ಸಾಮೂಹಿಕ ಪಠಣ ಸಂಸ್ಥೆಯ ಪರವಾಗಿ ಆಯೋಜಿಸಲಾಗುತ್ತದೆ. ಗುರುವಾರವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಸಂಜೆ 5:30 ರಿಂದ ರಾತ್ರಿ 9:00 ರವರೆಗೆ ಪಠಣ ನಡೆಯುತ್ತದೆ. ಗುರುವಾರ ದಿನ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 4:00 ರಿಂದ ಸಂಜೆ 7:00 ರವರೆಗೆ ಪಠಣ ನಡೆಯುತ್ತದೆ. ಮತ್ತು ಭಕ್ತರ ಸೌಲಭ್ಯಕ್ಕಾಗಿ ಒಂದು ದಿನ ಆನ್ ‌ಲೈನ್ ಪಠಣವೂ ಏರ್ಪಡಿಸಲಾಗುತ್ತದೆ.
 
ಈ ಸ್ತೋತ್ರದ ಕೊನೆಯ ಶ್ಲೋಕದ ಪ್ರಕಾರ, ಈ ಸ್ತೋತ್ರ ಪಠಣದಿಂದ ಸದ್ಧರ್ಮ, ಪ್ರೇಮ, ಸದ್ಬುದ್ಧಿ, ಇಶ್ವರ ಭಕ್ತಿ ಮತ್ತು ಸತ್ಸಂಗ ದೊರೆಯುತ್ತದೆ. ಮಾನವನ ಲೋಕಿಕ ಮತ್ತು ಆಧ್ಯಾತ್ಮಿಕ ಇಚ್ಛೆಗಳು ಈಡೇರುತ್ತವೆ. ಭಗವಂತನ ಮೇಲಿನ ಪ್ರೀತಿ, ಭಗವಂತನ ಬಗ್ಗೆ ಆಕರ್ಷಣೆ ಹೆಚ್ಚಾಗುತ್ತದೆ. ಪರಮಾನಂದಸ್ವರೂಪ ಶ್ರೀಗುರು ದತ್ತಾತ್ರೇಯರಿಗೆ ನಮಸ್ಕರಿಸಿ, "ಘೋರಕಷ್ಟಗಳಿಂದ ನಮ್ಮನ್ನು ಉದ್ಧರಿಸು" ಎಂಬ ಮನವಿಯೂ ಈ ಸ್ತೋತ್ರದಲ್ಲಿ ಇದೆ.
 
ಈ ಸ್ತೋತ್ರದಲ್ಲಿ "ಶ್ಲೋಕಪಂಚಕಮೇತದ್ಯೋ ಲೋಕಮಂಗಲವರ್ಧನಮ್। ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್॥" ಎಂದು ಕೊನೆಯಲ್ಲಿ ಹೇಳಲಾಗಿದೆ. ಇದರಿಂದ ನಮಗೆ ತಿಳಿಯುತ್ತದೆ ಈ ಸ್ತೋತ್ರ ಜಗತ್ತಿಗೆ ಮಂಗಳಕರವಾಗಿದೆ". ಈ ಸ್ತೋತ್ರವನ್ನು ಸಂಪೂರ್ಣ ನಂಬಿಕೆಯಿಂದ ಪಠಿಸುವ ಭಕ್ತನು ಶ್ರೀಗುರು ದತ್ತಾತ್ರೇಯರಿಗೆ ಪ್ರಿಯನಾಗುತ್ತಾನೆ" ಎಂದು ಶ್ರೀವಾಸುದೇವಾನಂದಸರಸ್ವತಿ ಹೇಳುತ್ತಾರೆ. ‘ಶ್ರೀ ಗುರುವಿಗೆ ಪ್ರಿಯನಾಗುವುದು’  - ಇದು ಭಕ್ತನಿಗೆ ಅತಿ ಶ್ರೇಷ್ಠ ಸಾಧನೆ ಆಗಿದೆ.

ಶ್ರದ್ಧಾವಾನರು ತಮ್ಮ ಲೌಕಿಕ ಸಮಸ್ಯೆಗಳನ್ನು ಪರಿಹರಿಸುವ, ಅವರ ಆಸೆಗಳನ್ನು ಪೂರೈಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಈ ಪರಿಣಾಮಕಾರಿ ದತ್ತ ಸ್ತೋತ್ರವನ್ನು ಪಠಿಸುವ ಅವಕಾಶ ಸದ್ಗುರು ಶ್ರೀ ಅನಿರುದ್ಧರಿಂದ ಸಿಕ್ಕಿತು

ಭಕ್ತಿಯಿಂದ ಸೇವೆಯ ವಿವಿಧ ಆಯ್ಕೆಗಳನ್ನು ಶ್ರದ್ಧಾವಂತರಿಗೆ ಲಭ್ಯವಾಗುವಂತೆ ಮಾಡಿರುವ ಬಾಪೂರವರು ಎ.ಎ.ಡಿ.ಎಮ್. (ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್) ಅನ್ನು ಸ್ಥಾಪಿಸಿರುವುದೇ ಮೂಲತಃ ಘೋರಕಷ್ಟೋದ್ಧರಣ ಸ್ತೋತ್ರದ ಪ್ರಾತ್ಯಕ್ಷಿಕ (ಪ್ರ್ಯಾಕ್ಟಿಕಲ್) ರೂಪವಾಗಿದೆ.