ಝಲಕಾರೀಬಾಯಿಯು ತನ್ನ ಕೊನೆಯ ಉಸಿರು ಎಳೆಯುವಾಗಲೂ ಬ್ರಿಟಿಷ್ ಸೈನ್ಯದ ಮುಂದೆ ಕಿರುಚುತ್ತಾ ಒಂದು ಮಾತು ಹೇಳಿದ್ದಳು - "ರಾಣಿ ಲಕ್ಷ್ಮೀಬಾಯಿ ಅಂದರೆ ಅಪ್ಪಟ ಸೂರ್ಯ, ಈಗ ಝಾನ್ಸಿ ಕೋಟೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ". ಯಾಕೆಂದರೆ ಮುಂದರ್ ಬೇಗಮ್ ಸ್ವತಃ ಮಾಹಿತಿ ಕಲೆಹಾಕಿ ಝಲಕಾರಿಗೆ ಒಂದು ವಿಷಯ ತಿಳಿಸಿದ್ದಳು. ಅದೇನೆಂದರೆ, ಜನರಲ್ ಹ್ಯೂಜ್ ರೋಜ್ಗೆ ಈ ಐದು ತತ್ವಗಳ (Principles) ಮೇಲೆ ಅಚಲವಾದ ನಂಬಿಕೆಯಿದೆ: ೧) ರಾಜ ಅಥವಾ ರಾಷ್ಟ್ರಪ್ರಮುಖನ ಬದಲಿಗೆ ಕೇವಲ ಸೈನ್ಯವನ್ನು ಕೊಂದರೆ ಅಷ್ಟಾಗಿ ಪ್ರಯೋಜನವಿಲ್ಲ, ಯಾಕೆಂದರೆ ಉಳಿದುಕೊಂಡ ರಾಜ ಅಥವಾ ನಾಯಕ ಮತ್ತೆ ಸೈನಿಕರನ್ನು ಒಗ್ಗೂಡಿಸುತ್ತಾನೆ. ೨) ಭಾರತೀಯ ರಾಜ-ರಾಣಿಯರು ವಿಲಾಸಿ ಜೀವನದಲ್ಲಿ ಮುಳುಗಿರುವುದರಿಂದ ಅವರಿಗೆ ಜನಸಾಮಾನ್ಯರ ಸಹಾನುಭೂತಿ ಅಥವಾ ಸಹಾಯ ಸಿಗುವುದಿಲ್ಲ. ೩) ಭಾರತೀಯರು ಬ್ರಿಟಿಷರ ಮುಂದೆ ಎಲ್ಲಾ ವಿಷಯಗಳಲ್ಲೂ ಅತ್ಯಂತ ಕೆಳಮಟ್ಟದವರು. ೪) ‘ಅಹಿಂಸೆ’ ಎನ್ನುವ ತತ್ವ ಭಾರತೀಯರ ಮನಸ್ಸಿನಲ್ಲಿ ದೊಡ್ಡ ಸ್ಥಾನ ಪಡೆದಿರುವುದರಿಂದ ಮತ್ತು ಹಿಂದೂಗಳು ಎಲ್ಲರಲ್ಲೂ ದೇವರ ಅಂಶವಿದೆ ಎಂದು ನಂಬುವುದರಿಂದ, ಶ್ರೀಮಂತ ಹಾಗೂ ಶಕ್ತಿಶಾಲಿ ಬ್ರಿಟಿಷರನ್ನು ಅವರು ದೇವರಂತೆಯೇ ಕಾಣುತ್ತಾರೆ. ೫) ಪ್ರಪಂಚದ ಯಾವುದೇ ಧರ್ಮದ ಮನುಷ್ಯ, ಅದರಲ್ಲೂ ವಿಶೇಷವಾಗಿ ಭಾರತೀಯರು ಸಾಯುವಾಗ ಸುಳ್ಳು ಹೇಳುವುದಿಲ್ಲ.
ರಾಣಿ ಲಕ್ಷ್ಮೀಬಾಯಿಯು ಇದೇ ಮಾಹಿತಿಯನ್ನು ಬಳಸಿಕೊಂಡು ರಹಸ್ಯವಾಗಿ ಎಲ್ಲಾ ಕಾರ್ಯಾಚರಣೆಗಳನ್ನು ಮಾಡಿದ್ದಳು. ಝಲಕಾರೀಬಾಯಿಯೂ ಇಂದು ಸಾಯುವಾಗ, ‘ರಾಣಿ ಲಕ್ಷ್ಮೀಬಾಯಿ ಕೋಟೆಯಲ್ಲೇ ಇದ್ದಾರೆ’ ಎಂದು ಹಸಿ ಸುಳ್ಳು ಹೇಳಿ ಜನರಲ್ ಹ್ಯೂಜ್ ರಾಣಿಯ ಹಿಂದೆ ಹೋಗದಂತೆ ತಡೆದಿದ್ದಳು. ಅದಕ್ಕಿಂತ ಮೊದಲು ಸುಮಾರು ಹನ್ನೆರಡು ಗಂಟೆಗಳ ಕಾಲ, ‘ನಾನೇ ರಾಣಿ ಲಕ್ಷ್ಮೀಬಾಯಿ’ ಎಂದು ಬ್ರಿಟಿಷರನ್ನು ನಂಬಿಸಿದ್ದಳು. ಇದರಿಂದಾಗಿ ಬ್ರಿಟಿಷ್ ಸೈನ್ಯದ ಸಂಪೂರ್ಣ ಗಮನ ಅವಳ ಮೇಲೆಯೇ ಕೇಂದ್ರೀಕೃತವಾಗಿತ್ತು. ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯು ತನ್ನ ಆಪ್ತ ಸಂಗಡಿಗರೊಂದಿಗೆ ತಾತ್ಯಾ ಟೋಪೆ ಇದ್ದ ಕಲ್ಪೀ ಗ್ರಾಮಕ್ಕೆ ತಲುಪಲು ಸಾಧ್ಯವಾಯಿತು. ಮುಂದರ್ ಬೇಗಮ್ ಕೂಡ ‘ರಾಣಿ ಲಕ್ಷ್ಮೀಬಾಯಿ ಗ್ವಾಲಿಯರ್ ತಲುಪಿದ್ದಾರೆ’ ಎನ್ನುವ ಸುದ್ದಿಯನ್ನು ಒಬ್ಬ ವಿಶ್ವಾಸಘಾತುಕ ಸೈನಿಕನ ಮುಂದೆ ಝಲಕಾರಿಗೆ ಹೇಳಿ (ಸಂದರ್ಭ ಕಥಾಮಂಜರಿ ೪-೩-೧೩) ಬ್ರಿಟಿಷರ ದಾರಿ ತಪ್ಪಿಸಿದ್ದಳು.
ಬ್ರಿಟಿಷರ ಅರ್ಧ ಸೈನ್ಯ ಗ್ವಾಲಿಯರ್ ಹಾದಿಯಲ್ಲಿ ಹೊರಟಿತು ಮತ್ತು ಇನ್ನರ್ಧ ಸೈನ್ಯ ಕೇವಲ ಝಲಕಾರಿಯ ಮೇಲೆ ನಿಗಾ ಇಡುತ್ತಾ ಹನ್ನೆರಡು ಗಂಟೆಗಳ ಕಾಲ ಅಲ್ಲೇ ಉಳಿಯಿತು. ಇದರಿಂದಾಗಿ ರಾಣಿ ಲಕ್ಷ್ಮೀಬಾಯಿ ಯಾವುದೇ ಅಡೆತಡೆಯಿಲ್ಲದೆ ಕಲ್ಪೀ ತಲುಪಲು ಸಾಧ್ಯವಾಯಿತು. ಕೋಟೆಯಲ್ಲಿದ್ದ ದಿವಾನ್ ರಘುನಾಥ ಸಿಂಗ್, ಸರ್ದಾರ್ ಮಂಜುನಾಥ ಪಹಾಡಿ, ರಾಜಕುಂವರಬಾಯಿ ಮತ್ತು ಕಮಲಕುಮಾರಿ ಈ ನಾಲ್ವರು ತಮಗೆ ಸಿಕ್ಕ ಸಮಯವನ್ನು ಬಳಸಿಕೊಂಡು ಮುಂದಿನ ಹೋರಾಟಕ್ಕಾಗಿ ಇನ್ನಷ್ಟು ಸಾಮರ್ಥ್ಯದಿ೦ದ ಸಿದ್ಧರಾದರು. ಹ್ಯೂಜ್ ನೇತೃತ್ವದ ಬ್ರಿಟಿಷ್ ಸೈನ್ಯ ಮೂರು ಭಾಗಗಳಾಗಿ ಹಂಚಿಹೋಗಲಿ ಎನ್ನುವುದೇ ಅವರ ಯುದ್ಧತಂತ್ರವಾಗಿತ್ತು.
ಒಂದು ಭಾಗ ಕೋಟೆಯೊಂದಿಗೆ ಹೋರಾಡುತ್ತಿರಬೇಕು ಮತ್ತು ಕೋಟೆಯನ್ನು ಕನಿಷ್ಠ ಮೂರು
ದಿನಗಳ ಕಾಲ ಹೋರಾಟದಲ್ಲಿ ಉಳಿಸಿಕೊಳ್ಳಬೇಕು. ಎರಡನೆಯದಾಗಿ, ಬ್ರಿಟಿಷ್ ಸೈನ್ಯದ ಇನ್ನೊಂದು ಭಾಗ ಗ್ವಾಲಿಯರ್ ಮಾರ್ಗವಾಗಿ ಹೋಗಬೇಕು ಮತ್ತು ಮೂರನೇ ಭಾಗ ಝಾನ್ಸಿಯ ಸುತ್ತಮುತ್ತಲ ಹಳ್ಳಿಗಳನ್ನು ವಶಪಡಿಸಿಕೊಳ್ಳುವ ಕೆಲಸದಲ್ಲಿ ಸಿಕ್ಕಿಬೀಳಬೇಕು.
ರಘುನಾಥ ಸಿಂಗ್ ದಿವಾನ್ ಅವರ ನೇತೃತ್ವದಲ್ಲಿ ತಯಾರಾದ ‘ಶಿವಮಹಾದೇವ ದಳ’ ಝಾನ್ಸಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಅಲ್ಲಲ್ಲಿ ಚಟುವಟಿಕೆಗಳನ್ನು ನಡೆಸುವ ಮೂಲಕ ಬ್ರಿಟಿಷ್ ಸೈನ್ಯವನ್ನು ಚದುರಿಸಿ ಇಡುತ್ತಿದ್ದರು. ಇದೇ ಬ್ರಿಟಿಷ್ ಸೈನ್ಯದ ಮೂರನೇ ಭಾಗದ ಮೇಲೆ ದಾಳಿ ಕೂಡ ಜೋರಾಗಿಯೇ ಆಗುತಿತ್ತು.
ರಾಣಿ ಲಕ್ಷ್ಮೀಬಾಯಿ ಸುರಕ್ಷಿತವಾಗಿ ಕಲ್ಪೀ ತಲುಪಿದಳು. ತಾತ್ಯಾ ಟೋಪೆಯವರ ಜೊತೆ ಸುದೀರ್ಘ ಚರ್ಚೆಯೊಂದಿಗೆ ಅವಳ ಭೇಟಿ ಯಶಸ್ವಿಯಾಗಿ ನಡೆಯಿತು. ರಾವ್ ಸಾಹೇಬ್ ಪೇಶ್ವೆ ಮತ್ತು ತಾತ್ಯಾ ಟೋಪೆ ಅವಳಿಗೆ ಸಂಪೂರ್ಣ ಸಹಕಾರ್ಯದ ಭರವಸೆ ನೀಡಿದರು.
ಲಕ್ಷ್ಮೀಬಾಯಿಯ ದುರ್ಗಾದಳ ಮತ್ತು ಶಿವಮಹಾದೇವ ದಳದ ಸ್ತ್ರೀ-ಪುರುಷರು ವಿವಿಧ ವೇಷಗಳಲ್ಲಿ, ವಿವಿಧ ಮಾರ್ಗಗಳ ಮೂಲಕ ಬಂದು ರಾಣಿಯನ್ನು ಸೇರಿಕೊಳ್ಳುತ್ತಿದ್ದರು.
ಈ ಮೂವರೂ ಸೇರಿದಾಗ ಸೈನ್ಯದ ಬಲ ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದು ಸಾವಿರವಾಯಿತು.
ಎಲ್ಲಾ ಯೋಜನೆಗಳನ್ನು ಅಚ್ಚುಕಟ್ಟಾಗಿ ರೂಪಿಸಿ ಜನರಲ್ ಹ್ಯೂಜ್ ಸೈನ್ಯದ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ತಯಾರಿ ನಡೆಯಿತು. ಕೇವಲ ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ ಮಾತ್ರ ಎದ್ದು ಕಾಣುತ್ತಿತ್ತು.
ರಾಣಿ ಲಕ್ಷ್ಮೀಬಾಯಿಯ ಗುಪ್ತಚರ ಇಲಾಖೆ ಬಹಳ ಚುರುಕಾಗಿ ಕೆಲಸ ಮಾಡುತ್ತಿತ್ತು. ಅವರು ತಂದ ಸುದ್ದಿಯ ಆಧಾರದ ಮೇಲೆ ರಾಣಿ ಒಂದು ಧೈರ್ಯದ ನಿರ್ಧಾರ ತೆಗೆದುಕೊಂಡಳು. ಅವಳ ಜನ್ಮಸ್ಥಳ ‘ವಾರಣಾಸಿ’. (ಅವಳ ತವರು ಮನೆಯಾದ ‘ತಾಂಬೆ’ ಕುಟುಂಬದವರು ಕಳೆದ ನೂರು ವರ್ಷಗಳಿಂದ ವಾರಣಾಸಿಯಲ್ಲೇ ವಾಸವಿದ್ದರು ಮತ್ತು ಪುಣೆಯೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು. ತಾಂಬೆಯವರ ಅನೇಕ ಹಿತೈಷಿಗಳು ವಾರಣಾಸಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿದ್ದರು. ಇಂದಿಗೂ ವಾರಣಾಸಿಯಲ್ಲಿ ಅನೇಕ ಮರಾಠಿ ಕುಟುಂಬಗಳು ಶತಮಾನಗಳಿಂದ ವಾಸಿಸುತ್ತಾರೆ.)
ರಾಣಿ ಲಕ್ಷ್ಮೀಬಾಯಿ ಸ್ವಲ್ಪ ಕಾಲ ವಾರಣಾಸಿಯಲ್ಲೇ ಇದ್ದಳು, ಆದರೆ ಅತ್ಯಂತ ರಹಸ್ಯವಾಗಿ. ಈ ಯುದ್ಧದಲ್ಲಿ ಎಷ್ಟು ಭಾರತೀಯ ಸಂಸ್ಥಾನಿಕರು ಭಾಗವಹಿಸಬಹುದು ಎಂದು ಅಂದಾಜಿಸಲು ಪ್ರಯತ್ನಿಸಿದಳು, ಆದರೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ.
ಲಕ್ಷ್ಮೀಬಾಯಿಯು ಸುಮಾರು ಮೂವತ್ತೆಂಟು ಸಂಸ್ಥಾನಿಕರನ್ನು ಖುದ್ದಾಗಿ ಭೇಟಿ ಮಾಡಿದಳು. ಸುಮಾರು ಒಂದು ತಿಂಗಳ ಕಾಲ ಇದಕ್ಕಾಗಿ ಅವಿರತ ಶ್ರಮಪಟ್ಟಳು. ಆದರೆ ಇಬ್ಬರು ಮೂವರು ಸಂಸ್ಥಾನಿಕರ ಭರವಸೆ ಬಿಟ್ಟರೆ ಬೇರೇನೂ ಕೈಗೂಡಲಿಲ್ಲ.
ಕೊನೆಗೆ ರಾಣಿ ಲಕ್ಷ್ಮೀಬಾಯಿ ತಾತ್ಯಾ ಟೋಪೆಯವರ ಹತ್ತು ಸಾವಿರ ಸೈನಿಕರ
ಸಹಾಯದೊಂದಿಗೆ ಝಾನ್ಸಿ ಕೋಟೆಯ ಮೇಲೆ ದಾಳಿ ಮಾಡಿ, ಅದನ್ನು ಮತ್ತೆ ವಶಪಡಿಸಿಕೊಳ್ಳಲು ನಿರ್ಧರಿಸಿದಳು.
ಯಾಕೆಂದರೆ ಕಲ್ಪೀಗೆ ಬಂದ ಕೇವಲ ಏಳು ದಿನಗಳಲ್ಲಿ ರಾಣಿಗೆ ಒಂದು ಸುದ್ದಿ ಸಿಕ್ಕಿತ್ತು - ‘ಬ್ರಿಟಿಷರು ಝಾನ್ಸಿ ಕೋಟೆಯನ್ನು ಗೆದ್ದುಕೊಂಡಿದ್ದಾರೆ’. ಅದನ್ನು ಯಾವುದೇ ಪರಿಸ್ಥಿತಿಯಲ್ಲೂ ಮರಳಿ ಪಡೆಯಲೇಬೇಕು ಎಂದು ರಾಣಿ ಪಣ ತೊಟ್ಟಿದ್ದಳು.
ಬ್ರಿಟಿಷರ ಆಕ್ರಮಣದಿಂದ ಹೇಗೋ ಬಚಾವಾಗಿದ್ದ ಕಮಲಕುಮಾರಿ ಚೌಹಾಣ್, ರಾಜಕುಂವರ ಯಾದವ್ ಮತ್ತು ಅವಳ ಅಣ್ಣ ಬಿಹಾರಿಲಾಲ್ ಯಾದವ್ ಈ ಮೂವರು ೧೧ ಮೇ ೧೮೫೮ರಂದು ಕಲ್ಪೀಗೆ ಬಂದು ರಾಣಿಯನ್ನು ಭೇಟಿಯಾದರು. ದಿವಾನ್ ರಘುನಾಥ ಸಿಂಗ್ ಹೇಗೆ ಹೋರಾಡಿದರು ಮತ್ತು ಹೇಗೆ ವೀರಮರಣ ಅಪ್ಪಿದರು ಎಂಬ ಸುದ್ದಿಯನ್ನು ಕೇಳಿ ರಾಣಿ ಮನಸ್ಸನ್ನು ಗಟ್ಟಿ ಮಾಡಿಕೊಂಡಳು. ಅವಳು ರಘುನಾಥ ಸಿಂಗ್ ದಿವಾನ್ ಅವರನ್ನು ತಂದೆಯ ಸಮಾನವಾಗಿ ಕಾಣುತ್ತಿದ್ದಳು.
ಆದರೆ ಅದಕ್ಕಿಂತ ದೊಡ್ಡ ಆಘಾತ ಮುಂದಿನ ಸಂಭಾಷಣೆಯಲ್ಲಿ ಕಾದಿತ್ತು. ಬ್ರಿಟಿಷರು ಝಾನ್ಸಿ ಕೋಟೆಗೆ ಮಾಡಿದ ದುಸ್ಥಿತಿಯನ್ನು ಆ ಮೂವರು ವಿವರಿಸಿದರು. ಕೋಟೆಯ ಪ್ರತಿಯೊಂದು ವಾಸ್ತುವನ್ನು ನಾಶ ಮಾಡಲಾಗಿತ್ತು. ಅನೇಕ ಮನೆಗಳನ್ನು ಸುಡಲಾಗಿತ್ತು ಮತ್ತು ನೂರಾರು ಸ್ತ್ರೀ-ಪುರುಷರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಆ ಮೂವರ ಪ್ರಕಾರ, ರಾಣಿ ಲಕ್ಷ್ಮೀಬಾಯಿ ಝಾನ್ಸಿಗೆ ಹಿಂತಿರುಗುವ ವಿಚಾರ ಬಿಟ್ಟುಬಿಡಬೇಕು ಎಂದಿತ್ತು. ರಾವ್ ಸಾಹೇಬ್ ಪೇಶ್ವೆ ಕೂಡ ಇದೇ ಸಲಹೆ ನೀಡಿದ್ದರು.
ಆದರೆ ಝಾನ್ಸಿ ರಾಣಿ ಮಾತ್ರ ಹಿಂದೆ ಸರಿಯಲು ಸಿದ್ಧಳಿರಲಿಲ್ಲ. ಅವಳು ಸೈನ್ಯದ ವಿವಿಧ ತಂಡಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಮುಂದೆ ಕಳುಹಿಸಲು ಆರಂಭಿಸಿದಳು. ೨೪ ಮೇ ರಂದು ರಾಣಿ ಲಕ್ಷ್ಮೀಬಾಯಿ ತನ್ನ ಬಳಿ ಉಳಿದಿದ್ದ ಒಂದು ಸಾವಿರ ಸೈನಿಕರೊಂದಿಗೆ ಮಧ್ಯರಾತ್ರಿ ಕಲ್ಪೀಯಿಂದ ಹೊರಡಲಿದ್ದಳು.
ಆದರೆ ವಿಶ್ವಾಸಘಾತುಕರು ತಮ್ಮ ಕೆಲಸ ಮಾಡಿದ್ದರು. ರಾಣಿ ಲಕ್ಷ್ಮೀಬಾಯಿ ಕಲ್ಪೀಯಿಂದ ಹೊರಬರುವ ಮೊದಲೇ, ಮೇಜರ್ ಜನರಲ್ ಹ್ಯೂಜ್ ರೋಜ್ ಭಾರಿ ಸೈನ್ಯದೊಂದಿಗೆ ಕಲ್ಪೀಯ ಮೇಲೆ ಭೀಕರ ದಾಳಿ ಮಾಡಿದ.
ತುರುಸಿನ ಯುದ್ಧ ನಡೆಯಿತು. ರಾಣಿ ಲಕ್ಷ್ಮೀಬಾಯಿಯ ೯೦% ಸೈನ್ಯ ಆಗಲೇ ಕಲ್ಪೀಯಿಂದ ಹೊರಗೆ ಹೋಗಿತ್ತು. ತಾತ್ಯಾ ಟೋಪೆಯವರ ಸ್ಥಿತಿಯೂ ಅಷ್ಟೇ ಆಗಿತ್ತು. ಆದರೂ ಇಬ್ಬರೂ ಕೆಚ್ಚೆದೆಯಿಂದ ಹೋರಾಡಿದರು.
ಕೊನೆಗೆ ಮೂರು ದಿನಗಳ ಭೀಕರ ಯುದ್ಧದ ನಂತರ ರಾಣಿ ಮತ್ತು ತಾತ್ಯಾ ಟೋಪೆ ಗುಪ್ತವಾಗಿ ಕಲ್ಪೀ ಬಿಡಲು ನಿರ್ಧರಿಸಿದರು - ಅದೂ ಬೇರೆ ಬೇರೆ ಹಾದಿಗಳಲ್ಲಿ.
ಯಾಕೆಂದರೆ ಲಕ್ಷ್ಮೀಬಾಯಿಯ ಹನ್ನೊಂದು ಸಾವಿರ ಸೈನಿಕರು ಕಲ್ಪೀಯಿಂದ ಝಾನ್ಸಿ ವರೆಗಿನ ಪ್ರದೇಶದಲ್ಲಿ ಅವಳಿಗಾಗಿ ಕಾಯುತ್ತಿದ್ದರು. ಅವರನ್ನು ಅನಾಥರನ್ನಾಗಿ ಮಾಡಿ ಅಸಹಾಯಕರನ್ನಾಗಿ ಬಿಡುವ ಕಲ್ಪನೆಯನ್ನು ರಾಣಿ ಒಪ್ಪಲು ಸಾಧ್ಯವಿರಲಿಲ್ಲ.
ರಾಣಿ ಲಕ್ಷ್ಮೀಬಾಯಿ ತನ್ನ ಈ ಮೂವರು ಸಂಗಡಿಗರೊಂದಿಗೆ ಗಂಗೆಯಲ್ಲಿ ಪ್ರಯಾಣಿಸುತ್ತಾ ಮುಂದೆ ಸಾಗಿದಾಗ, ಅವಳ ಮೈಮೇಲೆ ೫೯ ಗಾಯಗಳಿದ್ದವು.
ರಾಣಿಯ ಯುದ್ಧನೀತಿ ಮತ್ತು ರಾಜನೀತಿಯ ಪ್ರಮುಖ ಸಲಹೆಗಾರ್ತಿಯಾಗಿದ್ದ ಮೋತಿಬಾಯಿ, ರಾಣಿ ಲಕ್ಷ್ಮೀಬಾಯಿಯ ವೇಷದಲ್ಲಿ ೫೦೦ ಸೈನಿಕರೊಂದಿಗೆ ಕಾಡಿನ ಕಠಿಣ ಹಾದಿಯ ಮೂಲಕ ಝಾನ್ಸಿಯ ಕಡೆಗೆ ಹೊರಟಳು. ಇದು ಬ್ರಿಟಿಷ್ ಸೈನಿಕರ ದಾರಿ ತಪ್ಪಿಸಿ ರಾಣಿಯ ಪ್ರಯಾಣ ಸುಗಮವಾಗಲು ಮಾಡಿದ ತಂತ್ರವಾಗಿತ್ತು. ಅವಳೇ ಬರೆದ ಒಂದು ಪತ್ರದಲ್ಲಿ ರಾಣಿಯ ದೇಹದ ಮೇಲಿದ್ದ ೫೯ ಆಳವಾದ ಗಾಯಗಳ ಉಲ್ಲೇಖವಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅರ್ಧ ಹಾದಿಯಲ್ಲಿ ಮೋತಿಬಾಯಿಯನ್ನು ಭೇಟಿಯಾದಳು ಮತ್ತು ಗ್ವಾಲಿಯರ್ ಮೇಲೆ ದಾಳಿ ಮಾಡಿ ಅದನ್ನು ಗೆಲ್ಲುವ ನಿರ್ಧಾರವಾಯಿತು. ಗ್ವಾಲಿಯರ್ ಸಂಸ್ಥಾನ ಕೂಡ ಬ್ರಿಟಿಷರ ಅಡಿಯಲ್ಲೇ ಇತ್ತು ಮತ್ತು ಅಲ್ಲಿನ ರಾಜ ಕೇವಲ ಹೆಸರಿಗಷ್ಟೇ ಇದ್ದ. ಗ್ವಾಲಿಯರ್ ಕಡೆಗೆ ಹೊರಟ ರಾಣಿ ಲಕ್ಷ್ಮೀಬಾಯಿಯ ದೇಹ ಗಾಯಗೊಂಡಿತ್ತು, ಮನಸ್ಸು ನೋವಿನಿಂದ ಕೂಡಿತ್ತು ಮತ್ತು ಸೈನ್ಯದ ಬಳಿ ಹೆಚ್ಚಿನ ಆಯುಧಗಳಿರಲಿಲ್ಲ. ಆದರೂ ಅವಳು ಛಲ ಬಿಡಲಿಲ್ಲ. ರಾಣಿ ಲಕ್ಷ್ಮೀಬಾಯಿ ಒಂದು ಹೊಸ ಯೋಜನೆಯನ್ನೇ ರೂಪಿಸಿದಳು.
(ಕಥೆ ಮುಂದುವರಿಯುವುದು)

