ಬಾಪು ಅವರೇ ನನ್ನ ಜೀವನದ ಶಿಲ್ಪಕಾರ... -ರವೀಂದ್ರಸಿಂಹ ಬೆಂಡಖಳೆ, ಸಾಂಗ್ಲಿ

ಬಾಪು ಅವರೇ ನನ್ನ ಜೀವನದ ಶಿಲ್ಪಕಾರ... -ರವೀಂದ್ರಸಿಂಹ ಬೆಂಡಖಳೆ, ಸಾಂಗ್ಲಿ

ಇಂದಿನ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ; ಮತ್ತು ಆ ಸ್ಪರ್ಧೆಯಲ್ಲಿ ತಾವು ಉಳಿಯಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಪ್ರಯತ್ನ ಮಾಡಲೇಬೇಕಾಗುತ್ತದೆ. ಆದರೆ ಈ ಅನುಭವದಿಂದ ನಮಗೆ ತಿಳಿಯುವದೇನೆಂದರೆ, ಆ ಪ್ರಯತ್ನಗಳು ಯಶಸ್ವಿಯಾಗಲು ಸದ್ಗುರುವಿನ ಕೃಪೆಯೂ ಅಷ್ಟೇ ಅಗತ್ಯವಾಗಿದೆ.

-----------------------------------------------------------------------------------

ನಾನು ಸನ್ 1999ರಲ್ಲಿ ‘ವ್ಯಂಕಟೇಶ ಸಪ್ತ ಕೋಟಿ ಜಪ’ ಉತ್ಸವದ ಸಂದರ್ಭದಲ್ಲಿ ಪರಮಪೂಜ್ಯ ಸದ್ಗುರು ಅನಿರುದ್ಧ ಬಾಪೂಜಿಯವರನ್ನು ಮೊದಲ ಬಾರಿಗೆ ನೋಡಿದ ಕ್ಷಣದಿಂದಲೇ, ‘ಬಾಪೂಜಿಯವರೇ ನನ್ನ ಸರ್ವಸ್ವ’ ಎಂಬ ಭಾವನೆ ನನ್ನೊಳಗೆ ಮೂಡಿತು; ಮತ್ತು ನಾನು ಸಂಪೂರ್ಣವಾಗಿ ಬಾಪೂಜಿಯವರವನಾಗಿ ಬಿಟ್ಟೆ! 

ಸನ್ 2000 ರಿಂದ 2016 ರವರೆಗೆ ನನ್ನ ಜೀವನದಲ್ಲಿ ಅನೇಕ ಸುಖ-ದುಃಖಗಳನ್ನು ಕಂಡೆ ಮತ್ತು ಹಲವು ಸಂಕಲ್ಪ– ವಿಕಲ್ಪಗಳಿಂದ ಹೊರಬಂದೆ. ಆದರೆ ನನ್ನ ಜೀವನದಲ್ಲಿ ಸಂತೋಷದ ಕ್ಷಣವಾಗಲಿ ಅಥವಾ ದುಃಖದ ಸಮಯವಾಗಲಿ, ಪ್ರತಿಕ್ಷಣವೂ ನನ್ನ ಬಾಪೂಜಿಯವರು ನನ್ನ ಜೊತೆಯಲ್ಲಿದ್ದಾರೆ ಎಂಬ ಅನುಭವ ನನಗಾಗುತ್ತಿತ್ತು. ಅವರ ಕೃಪೆಯಿಂದಲೇ ಇಂದು ನನ್ನ ಜೀವನ ನಿಜವಾದ ಅರ್ಥದಲ್ಲಿ ಯಶಸ್ವಿಯಾಗಿದೆ ಮತ್ತು ನಮ್ಮ ಸಂಪೂರ್ಣ ಕುಟುಂಬ ಸಂತೋಷವಾಗಿದ್ದು ಸುಖವಾಗಿ ಜೀವನ ನಡೆಸುತ್ತಿದೆ.

ನಾನು ಒಬ್ಬ ವ್ಯಾಪಾರಿ ಮತ್ತು ನನಗೆ ಒಂದು ಕಿರಾಣಿ ಅಂಗಡಿ ಇದೆ. ಇಂದಿನ ಕಾಲದಲ್ಲಿ ಆಧುನಿಕ ಮಾಲ್‌ಗಳ ಯುಗ ಬಂದಿದೆ; ಅಲ್ಲಿ ಎಲ್ಲಾ ಅಗತ್ಯವಾದ ವಸ್ತುಗಳು ಒಂದೇ ಮೇಲ್ಛಾವಣಿಯಡಿಯಲ್ಲಿ ಲಭ್ಯವಿರುತ್ತವೆ. ಅಂದರೆ, ನನ್ನ ಅಂಗಡಿ ಮಾಲ್‌ಗಳ ಸ್ಪರ್ಧೆಯಲ್ಲಿ ಉಳಿಯಬೇಕೆಂದರೆ, ಕಾಲಕ್ಕೆ ತಕ್ಕಂತೆ ನಾನೂ ಬದಲಾಗಬೇಕಾಗುತ್ತದೆ. ಸದಾ ಬದಲಾಗುವ ಕಾಲದ ಅರಿವು ಹೊಂದಿರುವ ನಮ್ಮ ಸದ್ಗುರು ಬಾಪೂಜಿಯವರೂ ಸಹ, ನಮಗೆ ಯಾವಾಗಲೂ ಕಾಲದ ಜೊತೆಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತಾರೆ.

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ನಾನು ಸಹ ಸಾಮಾಜಿಕ ಮಾಧ್ಯಮದ (ಸೋಶಿಯಲ್ ಮೀಡಿಯಾ) ಸಹಾಯದಿಂದ ನನ್ನ ಅಂಗಡಿಯ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಯಾವುದೋ ಕಾರಣದಿಂದಾಗಿ ಅದರಲ್ಲಿ ನನಗೆ ಯಶಸ್ಸು ದೊರಕುತ್ತಿರಲಿಲ್ಲ. ಮಾಲ್‌ಗಳ ಸ್ಪರ್ಧೆಯಲ್ಲಿ ಉಳಿಯುವುದು ನನಗೆ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿತ್ತು.

ಆದರೆ ಬಾಪೂಜಿಯವರು ಇರುವಲ್ಲಿ ನಕಾರಾತ್ಮಕತೆಗೆ ಜಾಗವೇ ಇರದು; ಹಾಗೆಯೇ ಯಾವ ಕೊರತೆಯೂ ಇರುವುದಿಲ್ಲ. ನಮ್ಮ ಸದ್ಗುರು – ನಮ್ಮ ಡ್ಯಾಡ್ ಸದಾ ಕಾಲದ ಅರಿವು ಹೊಂದಿರುವವರು; ಹಾಗಿದ್ದರೆ ನಾವು… ಅವರ ಮಕ್ಕಳು ಹೇಗೆ ಹಿಂದೆ ಉಳಿಯಬಹುದು? ಬಾಪೂಜಿಯವರು ಏನು ಮಾಡಿದರೂ ಅದು ಅವರ ಮಕ್ಕಳ ಹಿತಕ್ಕಾಗಿ ಮಾತ್ರ. ನನ್ನ ಜೀವನದಲ್ಲೂ ಅದೇ ಸಂಭವಿಸಿತು. ನಿಧಾನವಾಗಿ ನನ್ನ ಜೀವನದಲ್ಲಿ ಸುಖದ ಬಾಗಿಲುಗಳು ತೆರೆಯತೊಡಗಿದವು. ಅದು ಹೇಗೆ ಸಾಧ್ಯವಾಯಿತು ಎಂಬುದನ್ನೇ ನಾನು ಈ ನನ್ನ ಅನುಭವದ ಮೂಲಕ ನಿಮಗೆ ಹೇಳಲು ಬಯಸುತ್ತೇನೆ.

ಸಾಂಗ್ಲಿಯಲ್ಲಿ ನಮ್ಮ ಸ್ನೇಹಿತರ ಒಂದು ಗುಂಪಿದೆ. ಒಮ್ಮೆ ನಾವು ಎಲ್ಲರೂ ಸೇರಿದ್ದಾಗ, ಒಬ್ಬ ಸ್ನೇಹಿತನು ಸಲಹೆ ನೀಡಿದನು: “ಕರ್ವೆ ಎಂ.ಐ.ಡಿ.ಸಿ.ಯಲ್ಲಿ ನಾವು ಎಲ್ಲರೂ ಸೇರಿ ಒಂದು ಪ್ಲಾಟ್ ಖರೀದಿಸೋಣ ಮತ್ತು ಅಲ್ಲಿ ಏನಾದರೂ ಆರಂಭಿಸೋಣ. ಪ್ರತಿಯೊಬ್ಬರೂ 40,000/- ರೂಪಾಯಿ ಕೊಡಬೇಕು.” ಆ ದಿನಗಳಲ್ಲಿ 40,000/- ರೂಪಾಯಿಯೂ ನನಗೆ ಬಹಳ ದೊಡ್ಡ ಮೊತ್ತವಾಗಿತ್ತು.

ಆದರೂ ಹೇಗೋ ಹಣದ ವ್ಯವಸ್ಥೆ ಮಾಡಿಕೊಂಡು, ನಾವು ಎಲ್ಲರೂ ಸೇರಿ ಆ ಹಣವನ್ನು ಆ ಸ್ನೇಹಿತನಿಗೆ ಒಪ್ಪಿಸಿ, ಸನ್ 2012 ರಲ್ಲಿ ನಮ್ಮ ಪ್ಲಾಟ್ ಖರೀದಿಸುವ ಕನಸು ಬಾಪೂಜಿಯವರ ಕೃಪೆಯಿಂದ ಸಾಕಾರವಾಯಿತು!

ಪ್ಲಾಟ್‌ನ್ನು ಖರೀದಿಸಿದ್ದೇವೆ, ಆದರೆ ಮುಂದೇನು ಮಾಡಬೇಕು ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ಸನ್ 2012 ರಿಂದ 2015 ರವರೆಗೆ ನಾವು ಏನೂ ಮಾಡಲಿಲ್ಲ. ಆದರೆ ಬಾಪೂಜಿಯವರು ನಿಧಾನವಾಗಿ ನಮಗಾಗಿ ಎಲ್ಲವನ್ನೂ ಸರಿಪಡಿಸುತ್ತಲೇ ಇದ್ದರು.

ನಮ್ಮ ನಾಲ್ವರು ಸ್ನೇಹಿತರಲ್ಲಿ ಒಬ್ಬರಿಗೆ ಸ್ವಲ್ಪ ವ್ಯವಹಾರ ಅನುಭವವಿತ್ತು. ಅವನಿಗೆ ‘ಸ್ಟೆಫ್ಲಾನ್ ಇಂಡಸ್ಟ್ರೀಸ್’ ಎಂಬ ಎರಡು ಕಾರ್ಖಾನೆಗಳಿದ್ದವು. ಅದರಿಂದಾಗಿ ಅವನು ನಮಗೆ ಒಂದು ಪ್ರಸ್ತಾವ ಇಟ್ಟನು - ನಾವು ನಾಲ್ವರೂ ಸೇರಿ ಈ ಹೊಸ ಸ್ಥಳದಲ್ಲಿ ಒಂದು ಕಾರ್ಖಾನೆ ಆರಂಭಿಸೋಣ ಎಂದು. ಈ ಯೋಜನೆಗಾಗಿ ಸುಮಾರು ಒಂದೂವರೆ – ಎರಡು ಕೋಟಿ ರೂಪಾಯಿಗಳ ವ್ಯವಸ್ಥೆ ಅಗತ್ಯವಿತ್ತು. ಅದಕ್ಕಾಗಿ ನಾವು ಎಲ್ಲರೂ ಆರಂಭಿಕ ಬಂಡವಾಳವಾಗಿ ತಲಾ ಐದು-ಐದು ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆವು. ಇದು ಅಪಾಯದ ಕೆಲಸವಾಗಿದ್ದರೂ, ನಾನು ಬಾಪೂಜಿಯವರ ಸ್ಮರಣೆಯೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಿದೆ.

ಬಾಪೂಜಿಯವರ ಮೇಲೆ ನಂಬಿಕೆ ಇದ್ದರೆ ನಮ್ಮ ಕೆಲಸ ಸುಲಭವಾಗಿ ಮುಂದೆ ಸಾಗುತ್ತದೆ ಎಂಬುದು ನನ್ನ ಅನುಭವ. ಇಲ್ಲಿಯೂ ಹಾಗೆಯೇ ನಡೆಯಿತು. ನಮ್ಮ ಮತ್ತೊಬ್ಬ ಸ್ನೇಹಿತ, ದುಬೈಯಲ್ಲಿ ಶಾಶ್ವತ ನಿವಾಸಿಯಾಗಿದ್ದವನು, ನಮ್ಮ ಈ ಯೋಜನೆಯ ಬಗ್ಗೆ ತಿಳಿದ ನಂತರ ಯಾವುದೇ ಬಡ್ಡಿಯಿಲ್ಲದೆ 40 ಲಕ್ಷ ರೂಪಾಯಿಗಳನ್ನು ಹೂಡಿಕೆಯಾಗಿ ನೀಡಿದನು! ಇಷ್ಟು ದೊಡ್ಡ ಮೊತ್ತವನ್ನು ಅಪ್ರತೀಕ್ಷಿತವಾಗಿ ಹೂಡಿಕೆ ಮಾಡಿದ ಕಾರಣ, ನಾವು ಅವನನ್ನು ನಮ್ಮ ವ್ಯವಹಾರದಲ್ಲಿ ‘ಸ್ಲೀಪಿಂಗ್ ಪಾರ್ಟ್ನರ್’ ಆಗಿ ಸೇರಿಸಿಕೊಂಡೆವು.

ಬಾಪೂಜಿಯವರ ಕೃಪೆಯಿಂದಲೇ, ಮಧ್ಯೆ ಬಂದ ಎಲ್ಲ ಅಡೆತಡೆಗಳು ದೂರವಾಗುತ್ತಲೇ ಹೋಯಿತು ಮತ್ತು ಕೊನೆಗೆ ಈ ವ್ಯವಹಾರ ಸ್ಥಾಪನೆಯಾಯಿತು. ಎಂ.ಐ.ಡಿ.ಸಿ.ಯಲ್ಲಿ ಒಂದೂವರೆ – ಎರಡು ಕೋಟಿ ರೂಪಾಯಿ ಮೌಲ್ಯದ ನಮ್ಮ ಕಾರ್ಖಾನೆ ಆರಂಭವಾಯಿತು… ಅದೂ ಸಂಪೂರ್ಣ ಲಾಭದೊಂದಿಗೆ! ಇದು ಎಲ್ಲವೂ ಕೇವಲ ಬಾಪೂಜಿಯವರ ಕೃಪೆಯಿಂದಲೇ ಸಾಧ್ಯವಾಯಿತು, ಎಂಬುದು ನನ್ನ ದೃಢ ನಂಬಿಕೆ.

ಅವರ ಕೃಪೆಯಿಂದಲೇ ನನ್ನ ಜೀವನಕ್ಕೆ ಹೊಸ ತಿರುವು ದೊರಕಿತು; ನಾನು ಒಂದು ಕಿರಾಣಿ ಅಂಗಡಿಯ ಮಾಲಿಕನಿಂದ ಒಂದು ದೊಡ್ಡ ಕಾರ್ಖಾನೆಯ ಮಾಲಿಕನಾಗಿಬಿಟ್ಟೆ - ಅದರಲ್ಲೂ, ದೊಡ್ಡ ಕಾರ್ಖಾನೆ ನಡೆಸುವ ಯಾವುದೇ ಅನುಭವವಿಲ್ಲದಿದ್ದರೂ ಮತ್ತು ಕೈಯಲ್ಲಿ ಹೆಚ್ಚಿನ ಬಂಡವಾಳವೂ ಇಲ್ಲದಿದ್ದರೂ. ನನ್ನ ಮಗನಿಗೂ ಪದವೀಧರ (ಗ್ರಾಜುಯೇಷನ್) ನಾಗುವ ಮೊದಲೇ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು.

ನಾನು ಈಗ ನನ್ನ ಬೆರಳಿಗೆ ಆದ ಒಂದು ಸಣ್ಣ ಅಪಘಾತದ ಅನುಭವವನ್ನು ನಿಮಗೆ ಹೇಳುತ್ತೇನೆ.

ಕಾರ್ಖಾನೆಯಲ್ಲಿನ ಒಂದು ಪ್ರೆಸ್ ಯಂತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನ ಬೆರಳು ಆ ಯಂತ್ರದಲ್ಲಿ ಸಿಕ್ಕಿಬಿಟ್ಟಿತು! ನಮ್ಮ ಬೆರಳಿನಲ್ಲಿ ಎಲುಬುಗಳೇ ಹೆಚ್ಚು ಇರುವುದರಿಂದ, ಎಲುಬಿಗೆ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಬಾಪೂಜಿಯವರ ಕೃಪೆಯಿಂದ ನನ್ನ ಬೆರಳಿನ ಎಲುಬಿಗೆ ಯಾವುದೇ ಹಾನಿಯಾಗಲಿಲ್ಲ. ನನ್ನ ಬೆರಳಿಗೆ 19 ಹೊಲಿಗೆಗಳನ್ನು ಹಾಕಲಾಯಿತು. ವೈದ್ಯರೂ ಹೇಳಿದರು, “ದೇವರ ಕೃಪೆಯಿಂದ ನಿಮ್ಮ ಬೆರಳಿನ ಎಲುಬು ಉಳಿದಿದೆ.” ಯೋಚಿಸಿ, 1.25 ಟನ್ ತೂಕದ ಪ್ರೆಸ್ ಯಂತ್ರದಲ್ಲಿ ಸಿಕ್ಕಿದರೆ ಬೆರಳಿನ ಸ್ಥಿತಿ ಹೇಗಿರಬೇಕಿತ್ತು? ಆದರೆ ಸದ್ಗುರುವಿನ ಕೃಪೆಯಿಂದ ಹಾಗೆ ಏನೂ ಆಗಲಿಲ್ಲ. ಆ ಯಂತ್ರದ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಮತ್ತು ನನ್ನ ಸ್ನೇಹಿತರೂ ಸಹ ಆಶ್ಚರ್ಯಚಕಿತರಾದರು.

ನನಗೆ ಸಂಪೂರ್ಣ ನಂಬಿಕೆ ಇದೆ - ನನ್ನ ಸದ್ಗುರುವಿನ ಕಾರಣದಿಂದಲೇ ನನ್ನ ಬೆರಳು ಉಳಿಯಿತು ಮತ್ತು ಎಲುಬಿಗೆ ಹಾನಿಯಾಗದೆ ಕೇವಲ ಹೊಲಿಗೆಗಳಲ್ಲೇ ವಿಷಯ ಮುಗಿಯಿತು. 

ನಂತರ ಅದೇ ವರ್ಷ, ನಾನು ನಮ್ಮ ಸಂಸ್ಥೆಯ ಕೊಲ್ಹಾಪುರ ಮೆಡಿಕಲ್ ಕ್ಯಾಂಪ್ ಸೇವೆಯಲ್ಲಿಯೂ ಭಾಗವಹಿಸಲು ಸಾಧ್ಯವಾಯಿತು. ಈಗ ಮಗನ ಭವಿಷ್ಯದ ಚಿಂತೆ ಕೂಡ ದೂರವಾಗಿದೆ.

ಬಾಪೂಜಿಯವರ ಭಕ್ತಿ ಮತ್ತು ಸೇವೆಯ ಈ ನನ್ನ ಆನಂದದಾಯಕ ಪ್ರಯಾಣ ಬಹಳ ಸಹಜವಾಗಿ ಸಾಗುತ್ತಿದೆ. ನನ್ನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಸಮಯೋಚಿತವಾಗಿ ನೆರವಾಗಿ, ನನ್ನ ಜೀವನಕ್ಕೆ ಸುಂದರವಾದ ತಿರುವು ನೀಡಿದವರು, ಬಾಪೂಜಿಯವರೇ ಎಂಬುದು ನನ್ನ ದೃಢ ನಂಬಿಕೆ.

|| ಹರಿ ಓಂ | ಶ್ರೀರಾಮ | ಅಂಬಜ್ಞ | ನಾಥಸಂವಿಧ್ ||