ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 30

ಲೋಕಮಾನ್ಯ ತಿಲಕರು ತಮ್ಮ ‘ಕೇಸರಿ’ ಪತ್ರಿಕೆಯ ಮೂಲಕ ಬಹಳ ಸ್ಪಷ್ಟ ಮಾತುಗಳಲ್ಲಿ ಕುದಿರಾಮ್ ಬೋಸ್ ಅವರ ಬಲಿದಾನವನ್ನು ಶ್ಲಾಘಿಸಿದರು ಮತ್ತು ‘ಮಹಿಳೆಯರ ಮೇಲಿನ ದಾಳಿ ತಪ್ಪಾದ ಗಾಡಿಯಿಂದಾಗಿ ನಡೆಯಿತು’ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಅಷ್ಟಕ್ಕೇ ನಿಲ್ಲದೆ ತಿಲಕರು, ಬ್ರಿಟಿಷರ ದೌರ್ಜನ್ಯಗಳು ಕಮಿಷನರ್ ರ‍್ಯಾ೦ಡ್ (ಪ್ಲೇಗ್ ಕೇಸ್), ಚೀಫ್ ಮ್ಯಾಜಿಸ್ಟ್ರೇಟ್ ಡಗ್ಲಾಸ್ ಕಿಂಗ್ಸ್‌ಫೋರ್ಡ್ (ಸುಶೀಲಸೇನ್ ಕೇಸ್) ಈ ಹಾದಿಯಲ್ಲಿ ಇನ್ನೂ ಹೆಚ್ಚುತ್ತಲೇ ಹೋಗುತ್ತವೆ ಎಂದು ಎಚ್ಚರಿಸಿದರು. ಆದ್ದರಿಂದಲೇ ಭಾರತೀಯರು ತಕ್ಷಣವೇ ‘ಸ್ವರಾಜ್ಯ‌’ ಅಂದರೆ ‘Self Rule’ಗಾಗಿ ಎಲ್ಲಾ ರೀತಿಯ ಮಾರ್ಗಗಳನ್ನು ಬಳಸಿ ಹೋರಾಡಲೇಬೇಕು ಎಂದು ಪ್ರತಿಪಾದಿಸಲು ಶುರು ಮಾಡಿದರು. ತಿಲಕರ ಇಂತಹ ಲೇಖನಗಳ ಅನುವಾದಗಳು ಕರಪತ್ರಗಳ ರೂಪದಲ್ಲಿ ಭಾರತದ ಪ್ರತಿಯೊಂದು ಪ್ರಾಂತ್ಯದಲ್ಲೂ ಹಂಚಲ್ಪಡಲಾರಂಭಿಸಿದವು.

ಅನೇಕ ಭಾರತೀಯ ಸಂಸ್ಥಾನಗಳ ರಾಜರು ‘ತಮ್ಮ ಸಂಸ್ಥಾನಗಳಲ್ಲಿ ತಿಲಕರ ಪತ್ರಿಕೆಗಳು ಅಥವಾ ಅವರ ಲೇಖನಗಳ ಕರಪತ್ರಗಳು ಬರಬಾರದು’ ಎಂದು ಬ್ರಿಟಿಷರಿಗಿಂತಲೂ ಹೆಚ್ಚು ಕಠಿಣ ಧೋರಣೆಗಳನ್ನು ಅನುಸರಿಸಿದರು. ಆದರೆ ಅವರ ಪ್ರಜೆಗಳೇ ನಿಧಾನವಾಗಿ ಅವರ ವಿರುದ್ಧ ತಿರುಗಿಬಿದ್ದರು, ಇದರಿಂದ ಸಂಸ್ಥಾನಿಕರು ತಿಲಕರ ಪತ್ರಿಕೆಗಳನ್ನು ವಿರೋಧಿಸುವುದನ್ನು ನಿಲ್ಲಿಸಬೇಕಾಯಿತು.

ಆದರೆ ಇಂತಹ ಘಟನೆಗಳಿಂದಾಗಿ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ತಿಲಕರನ್ನು ಮಟ್ಟಹಾಕಲು ಹವಣಿಸಿತು. ತಿಲಕರನ್ನು ಮುಗಿಸಲು ಅನೇಕ ರಹಸ್ಯ ಯೋಜನೆಗಳನ್ನು ರೂಪಿಸಲಾಯಿತು. ಆದರೆ ಬ್ರಿಟನ್ ಪಾರ್ಲಿಮೆಂಟ್‌ನ ಕೆಲವು ಲೇಬರ್ ಪಾರ್ಟಿಯ ಸದಸ್ಯರು ಇದನ್ನು ತೀವ್ರವಾಗಿ ವಿರೋಧಿಸಿದರು. ‘ಇಂತಹ ರಹಸ್ಯ ಸಂಗತಿಗಳು ಹೊರಬಂದರೆ ಬ್ರಿಟಿಷರಿಗೆ ಒಂದು ದಿನವೂ ಭಾರತದಲ್ಲಿ ಇರಲು ಸಾಧ್ಯವಾಗುವುದಿಲ್ಲ‌’ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಗೆ ತಿಲಕರ ಮೇಲೆ ರಾಜದ್ರೋಹದ ಮೊಕದ್ದಮೆ ಹೂಡಲಾಯಿತು ಮತ್ತು ಅವರಿಗೆ ಆರು ವರ್ಷಗಳ ಕಠಿಣ ಸಜೆ ಹಾಗೂ ಕಾಲಾಪಾನಿ ಶಿಕ್ಷೆಯನ್ನು ವಿಧಿಸಲಾಯಿತು. ಅದೂ ಕೂಡ ಬರ್ಮಾದ (ಮ್ಯಾನ್ಮಾರ್) ‘ಮಂಡಾಲಯ‌’ದಂತಹ ಭೀಕರ ಜೈಲಿನಲ್ಲಿ.

ಈ ಕೇಸಿನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರು ತಿಲಕರ ಪರ ಪ್ರಮುಖ ವಕೀಲರಾಗಿದ್ದರು ಮತ್ತು ಅವರು ತಿಲಕರ ಕೇಸ್ ನಡೆಸಲು ಹಗಲಿರುಳು ಶ್ರಮಿಸಿದರು. (ಇಂತಹ ಜಾತ್ಯತೀತ ವಿಚಾರಧಾರೆಯ ಮತ್ತು ನಿಜವಾದ ದೇಶಭಕ್ತನಾಗಿದ್ದ ಜಿನ್ನಾ, ಮುಂದೆ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ತಪ್ಪು ನಿರ್ಧಾರಗಳಿಂದಾಗಿ ಭಾರತದ ವಿರುದ್ಧ ತಿರುಗಿ ಪಾಕಿಸ್ತಾನದ ಜನಕನಾದನು.)

ಶಿಕ್ಷೆ ಪ್ರಕಟಿಸಿದ ನಂತರ ಜಸ್ಟಿಸ್ ಡಾವರ್ ದಿನಶ್ವ ಅವರು ತಿಲಕರಿಗೆ ಅವರ ಅಭಿಪ್ರಾಯ ಕೇಳಿದರು.

ಲೋಕಮಾನ್ಯ ತಿಲಕರು ಕೋರ್ಟಿನಲ್ಲೇ ಗುಡುಗಿದರು, “ನನಗೆ ಇಷ್ಟೇ ಹೇಳುವುದಿದೆ, ಜ್ಯೂರಿಗಳ

ನಿರ್ಧಾರ ಏನೇ ಇರಲಿ, ನಾನು ನಿರ್ದೋಷಿ. ಈ ಜಗತ್ತಿನ ಮೇಲೆ ನಿಜವಾದ ಅಧಿಕಾರವಿರುವುದು ಪರಮಾತ್ಮನ ಶಕ್ತಿಗೆ ಮತ್ತು ಆ ಈಶ್ವರನೇ ಎಲ್ಲವನ್ನೂ ನಡೆಸುತ್ತಿರುತ್ತಾನೆ. ಇಂದು ಆ ಸರ್ವಶಕ್ತ ಭಗವಂತನ ಇಚ್ಛೆ (The will of Omnipotent Providence) ಏನಿದೆಯೆಂದರೆ, ನನ್ನ ಭಾಷಣಗಳು ಮತ್ತು ಲೇಖನಗಳಿಗಿಂತಲೂ ಹಲವು ಪಟ್ಟು ಹೆಚ್ಚು ಪ್ರಭಾವಶಾಲಿ ಕೆಲಸ ನನ್ನ ಜೈಲಿನ ಯಾತನೆಯಿಂದ ಆಗಲಿ ಎಂದಿರಬಹುದು.”

ಸಂಪೂರ್ಣ ಭಾರತದಾದ್ಯಂತ ಲೋಕಮಾನ್ಯ ತಿಲಕರಿಗೆ ಬೆಂಬಲ ನೀಡಲು ಮತ್ತು ಬ್ರಿಟಿಷರನ್ನು ವಿರೋಧಿಸಲು ಮೆರವಣಿಗೆಗಳು, ಸಭೆಗಳು, ಚರ್ಚಾಗೋಷ್ಠಿಗಳು ಮತ್ತು ದೇಶಭಕ್ತಿಯ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಲೇ ಇದ್ದವು.

ಬ್ರಿಟಿಷರು ತಿಲಕರನ್ನು ಬರ್ಮಾದ ಮಂಡಾಲಯಕ್ಕೆ ಕರೆದೊಯ್ದರು ಮತ್ತು ೫೨ ವರ್ಷದ, ವೃದ್ಧಾಪ್ಯದ ಕಡೆಗೆ ವಾಲುತ್ತಿದ್ದ ಆ ವ್ಯಕ್ತಿಯ ಮೇಲೆ ಅತೀವ ದೌರ್ಜನ್ಯ ಶುರು ಮಾಡಿದರು. ತೆಂಗಿನ ನಾರಿನಿಂದ (Coir) ಹಗ್ಗ ಹೊಸೆಯುವುದು, ಚಾಪೆ ಮತ್ತು ಚೀಲಗಳನ್ನು ಮಾಡುವುದು ಇಂತಹ ಕೆಲಸಗಳನ್ನು ತಿಲಕರು ಪ್ರತಿದಿನ ಮಾಡಬೇಕಿತ್ತು.

ಅದರ ಜೊತೆಗೆ ತಿಲಕರಿಗೆ ನೀಡುತ್ತಿದ್ದ ಊಟವೂ ಕೂಡ ಬಹಳ ಕಳಪೆ ಮಟ್ಟದ್ದಾಗಿತ್ತು ಮತ್ತು ಉದ್ದೇಶಪೂರ್ವಕವಾಗಿ ಸಿಹಿ ಪದಾರ್ಥಗಳನ್ನೇ ನೀಡಲಾಗುತ್ತಿತ್ತು. ತಿಲಕರಿಗೆ ಮಧುಮೇಹದ (Early Diabetes) ಆರಂಭಿಕ ಲಕ್ಷಣಗಳಿದ್ದ ಕಾರಣ ಅವರಿಗೆ ಸಾಧಾರಣ ಊಟವನ್ನು ನೀಡುತ್ತಿರಲಿಲ್ಲ. ಅವರ ಔಷಧಿಗಳನ್ನು ನಿಲ್ಲಿಸಿ ಕೇವಲ ಸಿಹಿ ಪದಾರ್ಥಗಳನ್ನೇ ನೀಡಿದ್ದರಿಂದ ಲೋಕಮಾನ್ಯ ತಿಲಕರ ಡಯಾಬಿಟಿಸ್ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು.

ಅದರಲ್ಲೂ ತಿಲಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನಿರಾಕರಿಸಲಾಗಿತ್ತು. ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರನ್ನು ಬ್ರಿಟಿಷ್ ಸರ್ಕಾರ ಜೈಲಿನಲ್ಲಿ ಇರಿಸಿದಾಗ ಅವರಿಗೆ ಎಲ್ಲಾ ರೀತಿಯ ರಾಜಮರ್ಯಾದೆ ಇರುತ್ತಿತ್ತು ಮತ್ತು ಯಾವುದೇ ಕೆಲಸ ಕೊಡುತ್ತಿರಲಿಲ್ಲ - ಉದಾಹರಣೆಗೆ ‘ಆಗಾಖಾನ್ ಪ್ಯಾಲೇಸ್‌’ನಂತಹ ಐಷಾರಾಮಿ ಕಟ್ಟಡಗಳು ಅವರಿಗೆ ಸಿಗುತ್ತಿದ್ದವು.

ಹೀಗಾಗಿ ೧೬ ಜೂನ್ ೧೯೧೪ ರಂದು ಅಂದರೆ ಪೂರ್ಣ ಆರು ವರ್ಷಗಳ ಶಿಕ್ಷೆ ಅನುಭವಿಸಿದ ನಂತರವೇ ತಿಲಕರು ಜೈಲಿನಿಂದ ಹೊರಬಂದಾಗ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅವರಿಗೆ ಒಂದೊಂದು ಹೆಜ್ಜೆ ಇಡುವುದು ಕೂಡ ಕಷ್ಟವಾಗಿತ್ತು. ಆದರೆ ಅಂತಹ ಸ್ಥಿತಿಯಲ್ಲೂ ತಿಲಕರು ತಮ್ಮ ಪ್ರವಾಸಗಳ ವೇಗವನ್ನು ಕಿಂಚಿತ್ತೂ ಕಡಿಮೆ ಮಾಡಲಿಲ್ಲ ಮತ್ತು ಬ್ರಿಟಿಷ್ ಆಡಳಿತದ ಮೇಲೆ ತಮ್ಮ ಲೇಖನಿಯಿಂದ ಮತ್ತೆ ದಾಳಿ ಶುರು ಮಾಡಿದರು.

ಲೋಕಮಾನ್ಯ ತಿಲಕರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಮೃದು ಧೋರಣೆಯ ನಾಯಕರ ಕುತಂತ್ರಗಳನ್ನು ಗಮನಿಸಿದರು ಮತ್ತು ಇದರಿಂದ ಬೇಸತ್ತು ‘ಅನಿ ಬೆಸೆಂಟ್’ ಅವರ ಸಹಕಾರದೊಂದಿಗೆ ‘ಹೋಮ್ ರೂಲ್ ಲೀಗ್’ ಸ್ಥಾಪಿಸಿದರು.

ಡಾ. ಅನಿ ಬೆಸೆಂಟ್ ಅವರು ೧ ಅಕ್ಟೋಬರ್ ೧೮೪೭ ರಂದು ಲಂಡನ್‌ನಲ್ಲಿ ಜನಿಸಿದರು. ಅವರ ತವರು ಮನೆಯ ಹೆಸರು ‘ಅನಿ ವುಡ್’. ಅವರ ತಾಯಿ ಐರಿಶ್ ಮೂಲದವರಾಗಿದ್ದರು ಮತ್ತು ಐರಿಶ್ ಜನರು ಬ್ರಿಟಿಷ್ ಸರ್ಕಾರದ ವಿರುದ್ಧ ಸ್ವತಂತ್ರ ಐರ್ಲೆಂಡ್‌ಗಾಗಿ ಹೋರಾಡುತ್ತಿದ್ದರು.

ಅನಿ ಬೆಸೆಂಟ್ ಅವರು ಐರಿಶ್ ಮತ್ತು ಭಾರತೀಯ ಸ್ವಾತಂತ್ರ್ಯದ ಪ್ರಬಲ ಬೆಂಬಲಿಗರಾಗಿದ್ದರು. ಅವರು ಕೂಡ ಭಾರತಕ್ಕೆ ಬಂದು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಲಾರಂಭಿಸಿದರು.

ಇಸವಿ ೧೯೦೨ ರಲ್ಲಿ ಡಾ. ಅನಿ ಬೆಸೆಂಟ್ ಅವರು ಬಹಳ ಕಟು ಶಬ್ದಗಳಲ್ಲಿ ಭಾರತದ ಮೇಲಿನ ಬ್ರಿಟಿಷ್ ಆಡಳಿತವನ್ನು ವಿವರಿಸಿದ್ದರು - “ಬ್ರಿಟಿಷರು ಭಾರತದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಆಳುತ್ತಿದ್ದಾರೆ ಎಂಬುದು ಸುಳ್ಳಿನ ಪರಮಾವಧಿ. ಇಂಡಿಯಾವನ್ನು ಕೇವಲ ಲಾಭ ಮಾಡಿಕೊಳ್ಳುವ ಸಾಧನವಾಗಿ ಬಳಸಲಾಗುತ್ತಿದೆ ಮತ್ತು ಇಲ್ಲಿನ ನಾಗರಿಕರನ್ನು (The sons of the land) ಗುಲಾಮರಂತೆ ಕಾಣಲಾಗುತ್ತಿದೆ.”

೧೯೧೪ ರಲ್ಲಿ ಮೊದಲ ಮಹಾಯುದ್ಧ (First World War) ಶುರುವಾದಾಗ, ಬ್ರಿಟಿಷರು ಭಾರತದಿಂದ ಸೈನಿಕರ ಭರ್ತಿ ಆರಂಭಿಸಿದರು. ಆಗ ತಿಲಕರೊಂದಿಗೆ ರಹಸ್ಯ ಸಂಪರ್ಕ ಸಾಧಿಸಿ, ‘ನ್ಯೂ ಇಂಡಿಯಾ’ ಪತ್ರಿಕೆಯ ಸಂಪಾದಕಿಯಾಗಿ ಅನಿ ಬೆಸೆಂಟ್ ಗುಡುಗಿದರು - “England’s need is India’s opportunity (ಇಂಗ್ಲೆಂಡಿನ ಅಗತ್ಯವೇ ಭಾರತಕ್ಕೆ ಸಿಕ್ಕ ದೊಡ್ಡ ಅವಕಾಶ).” 

೧೯೧೪ ರ ನಂತರ ಮತ್ತೆ ತಿಲಕರು ಜೈಲಿಗೆ ಹೋದಾಗಲೂ ಡಾ. ಅನಿ ಬೆಸೆಂಟ್ ಅವರು ಹೋಮ್ ರೂಲ್ ಲೀಗ್ ಕೆಲಸವನ್ನು ಭರದಿಂದ ಮುಂದುವರಿಸಿದರು. ೨೮ ಏಪ್ರಿಲ್ ೧೯೧೬ ರಂದು ಹೋಮ್ ರೂಲ್ ಲೀಗ್ ಸ್ಥಾಪನೆಯಾಯಿತು. ಡಾ. ಬೆಸೆಂಟ್ ಅವರು ಹೆಚ್ಚಾಗಿ ಭಾರತೀಯ ಉಡುಪನ್ನೇ ಧರಿಸುತ್ತಿದ್ದರು.

ಮಂಡಾಲಯದ ಜೈಲಿನಲ್ಲಿದ್ದಾಗ ಲೋಕಮಾನ್ಯ ತಿಲಕರು ಭಗವದ್ಗೀತೆಯ ಮೇಲೆ ಆಳವಾದ ವಿಶ್ಲೇಷಣೆ ನೀಡುವ ‘ಗೀತಾರಹಸ್ಯ’ ಎಂಬ ಅದ್ಭುತ ಗ್ರಂಥವನ್ನು ಬರೆದರು. ಹಗ್ಗ ಹೊಸೆಯುವ ಕೆಲಸದಿಂದಾಗಿ ತಮ್ಮ ಕೈಗಳಿಗೆ ಅನೇಕ ಗಾಯಗಳಾಗಿದ್ದರೂ ಕೂಡ, ತಿಲಕರು ಅಂತಹ ನೋವಿನ ಕೈಗಳಲ್ಲಿ ಲೇಖನಿ ಹಿಡಿದು ಈ ದೊಡ್ಡ ಗ್ರಂಥವನ್ನು ಬರೆದರು. ಈ ಗ್ರಂಥವು ಇಡೀ ಭಾರತಕ್ಕೆ ಕರ್ಮಯೋಗದ ಪ್ರಖರ ಪಾಠವನ್ನು ನೀಡಿತು.

ಜೈಲಿನಿಂದ ಹೊರಬಂದ ತಕ್ಷಣ ಲೋಕಮಾನ್ಯ ತಿಲಕರು ಇಡೀ ಭಾರತವನ್ನು ಸುತ್ತಾಡಲು ಶುರು ಮಾಡಿದರು. ಅದಕ್ಕಾಗಿ ಅವರು ನೂರಾರು ಸಣ್ಣ ನಗರಗಳು ಮತ್ತು ಸಾವಿರಾರು (ಸುಮಾರು ೯೦,೦೦೦) ಹಳ್ಳಿಗಳಿಗೆ ಭೇಟಿ ನೀಡಿದರು. ಪ್ರತಿಯೊಂದು ಕಡೆಯೂ ಸಭೆಗಳನ್ನು ನಡೆಸಿದರು.

ಭಾರತೀಯ ಹಳ್ಳಿಗಳ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಈ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೊದಲು ಮಾಡಿದ್ದು ತಿಲಕರು. ಕುಗ್ರಾಮಗಳಲ್ಲೂ ತಿಲಕರ ಸಭೆಗೆ ಸಾವಿರಾರು ಜನರು ಸೇರುತ್ತಿದ್ದರು, ಆ ಹಳ್ಳಿಯ ಜನಸಂಖ್ಯೆ ಕೇವಲ ೫೦೦ ಇದ್ದರೂ ಕೂಡ.

ತಿಲಕರ ಬಿರುಸಿನ ಪ್ರವಾಸಗಳು ಮತ್ತು ತೀಕ್ಷ್ಣವಾದ ಬರವಣಿಗೆಯಿಂದ ಬ್ರಿಟಿಷ್ ಅಧಿಕಾರಕ್ಕೆ ದೊಡ್ಡ ಪೆಟ್ಟು ಬೀಳಲಾರಂಭಿಸಿತು. ಅವರು ಗಾಂಧೀಜಿಯವರಿಗೆ ಅಹಿಂಸೆಯ ಅತಿಯಾದ ಪ್ರಚಾರದಿಂದ ದೂರವಿರಲು ಬಹಳ ಕಟುವಾಗಿ ಹೇಳಿದರು. ಆದರೆ ಐದು ಸಭೆಗಳ ನಂತರವೂ ಗಾಂಧೀಜಿಯವರು ತಿಲಕರ ಮಾತನ್ನು ಕೇಳಲು ಸ್ಪಷ್ಟವಾಗಿ ನಿರಾಕರಿಸಿದರು ಮತ್ತು ಕಾಂಗ್ರೆಸ್‌ನಲ್ಲಿ ಮೃದು ಧೋರಣೆಯ ಗುಂಪನ್ನು ಮತ್ತಷ್ಟು ಬಲಪಡಿಸಲು ಶುರು ಮಾಡಿದರು.

ತಿಲಕರು ೧೯೧೬ ರಲ್ಲಿ ಮತ್ತೆ ಒಂದೂವರೆ ವರ್ಷ ಜೈಲಿಗೆ ಹೋದರು. ಅಲ್ಲಿಂದ ಹೊರಬಂದ ಮೇಲೆಯೂ ಅವರ ಕಾರ್ಯ ಮುಂದುವರಿಯಿತು. ಆದರೆ ೧ ಆಗಸ್ಟ್ ೧೯೨೦ ರಂದು ಮುಂಬೈನ

‘ಸರ್ದಾರ್‌ಗೃಹ’ ಎಂಬ ಹೋಟೆಲ್‌ನಲ್ಲಿ ಕೇವಲ ಒಂದು ದಿನದ ಅನಾರೋಗ್ಯದಿಂದ ಅವರು ನಿಧನರಾದರು.

ಪ್ರತಿಯೊಬ್ಬ ಭಾರತೀಯನಿಗೂ ಇದು ದೊಡ್ಡ ಆಘಾತವಾಗಿತ್ತು. ಬ್ರಿಟಿಷರೇ ತಿಲಕರಿಗೆ ವಿಷ ಕೊಟ್ಟಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯನೂ ನಂಬಿದ್ದನು. ನಿಜವೇನು ಎಂಬುದು ಆ ಭಗವಂತನೇ ಬಲ್ಲ.

(ಕಥೆ ಮುಂದುವರಿಯುವುದು)